Jog falls

Jog falls Contact information, map and directions, contact form, opening hours, services, ratings, photos, videos and announcements from Jog falls, Public Service, jog falls �, Sagar.

18/09/2025

ಶರಾವತಿ ಕಣಿವೆಯಲ್ಲಿ ವಿದ್ಯುತ್ ಪಂಪ್ಡ್ ಸ್ಟೋರೇಜ್​ ಯೋಜನೆ; ಜನ ಆತಂಕ ಪಡಬೇಕಾಗಿಲ್ಲ ಎಂದು ಅಧಿಕಾರಿಗಳ ಸ್ಪಷ್ಟನೆ - ELECTRIC PUMPED STORAGE PROJECT
ಕರ್ನಾಟಕ ವಿದ್ಯುತ್ ನಿಗಮ ನಿಯಮಿತವು ಶರಾವತಿ ಕಣಿವೆಯಲ್ಲಿ ವಿದ್ಯುತ್ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ.
ಕಾರವಾರ (ಉತ್ತರ ಕನ್ನಡ) :ಪ್ರಪಂಚದ ಅತಿದೊಡ್ಡ ಬ್ಯಾಟರಿ ತಂತ್ರಜ್ಞಾನದಂತೆ ಬಳಸಬಹುದಾದ 2000 ಮೆಗಾವ್ಯಾಟ್ ಸಾಮರ್ಥ್ಯದ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಶರಾವತಿ ಕಣಿವೆಯಲ್ಲಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಜಾರಿಗೆ ತರಲು ಮುಂದಾಗಿದೆ. ಎರಡು ಜಲಾಶಯಗಳ ನಡುವೆ ಹೆಚ್ಚುವರಿ ವಿದ್ಯುತ್ ಬಳಸಿಕೊಂಡು ಪೈಪ್ ಲೈನ್ ಮೂಲಕ ನೀರು ಎತ್ತುವ ಹಾಗೂ ಬೇಡಿಕೆ ಇದ್ದಾಗ ಅದನ್ನು ಬಳಸಿಕೊಳ್ಳುವ ಮೂಲಕ ವಿದ್ಯುತ್ ಗ್ರಿಡ್​​ಗೆ ಸ್ಥಿರತೆ ಒದಗಿಸುವ ಯೋಜನೆ ಜಾರಿಗೆ ತರಲು ಮುಂದಾಗಿದೆ.

ಶರಾವತಿ ಪಿಎಸ್​​ಪಿ ಯೋಜನೆಯಡಿ 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗಲಿದೆ. ಈ ಭಾರಿ ಪ್ರಮಾಣದ ವಿದ್ಯುತ್ ಉತ್ಪಾದನೆಯ ಈ ಯೋಜನೆಯನ್ನು ಕೆಪಿಸಿಎಲ್ ಅತಿ ಕಡಿಮೆ ಪರಿಸರ ಹಾನಿಯೊಂದಿಗೆ ಸಿದ್ಧಪಡಿಸಿದೆ. ಈ ಯೋಜನೆ ಜಾರಿ ವೇಳೆ ಈಗಾಗಲೇ ನಿರ್ಮಾಣವಾಗಿರುವ ಗೇರುಸೊಪ್ಪ ಮತ್ತು ತಲಕಳಲೆ ಅಣೆಕಟ್ಟೆಗಳನ್ನು ಬಳಸಿಕೊಳ್ಳುವ ಪರಿಣಾಮ ಹೊಸ ಅಣೆಕಟ್ಟೆ ನಿರ್ಮಾಣದಂತಹ ಕಾಮಗಾರಿ ಈ ಯೋಜನೆಯಲ್ಲಿ ಇಲ್ಲ.
ಕಾರ್ಯಪಾಲಕ ಇಂಜಿನಿಯರ್ (ಸಿವಿಲ್) ವಿಜಯ್ ಹಾಗೂ ಕೆಪಿಸಿಎಲ್​​ನ ಮುಖ್ಯ ಇಂಜಿನಿಯರ್ ರಮೇಶ್ ಅವರು ಮಾತನಾಡಿದ್ದಾರೆ (ETV Bharat)
ಇನ್ನು ಭೂಮಿಯ ಆಳದಲ್ಲಿ ಟನಲ್ (ಸುರಂಗ) ಮೂಲಕ ನೀರು ಹರಿಬಿಡುವ ಮತ್ತು ಅದೇ ಟನಲ್ ಮೂಲಕ ನೀರನ್ನು ಎತ್ತುವಳಿ ಮಾಡುವ ಪರಿಣಾಮ ಸುರಂಗ ನಿರ್ಮಾಣದ ಭೂಮಿಯ ಮೇಲ್ಮೈನಲ್ಲಿ ಇರುವ ಮರ, ಗಿಡ, ಪರಿಸರಕ್ಕೆ ಯಾವುದೇ ಹಾನಿ ಆಗುವುದಿಲ್ಲ. ಪ್ರಸ್ತುತ ಇರುವ ರಸ್ತೆಯನ್ನೇ ಬಳಕೆ ಮಾಡಿಕೊಳ್ಳಲು ಉದ್ದೇಶಿಸಲಾಗಿದ್ದು, ಪ್ರಸ್ತುತ 3.5 ಮೀಟರ್ ಇರುವ ಈ ರಸ್ತೆಯನ್ನು ಅಗತ್ಯ ವಸ್ತುಗಳ ರವಾನೆಗೆ ಅನುವಾಗುವಂತೆ 5.5 ಮೀಟರ್ ವಿಸ್ತರಿಸಲು ಯೋಜಿಸಲಾಗಿದೆ. ಭೂಮಿಯ ಒಳಗೆ ಪಂಪ್ ಹೌಸ್ ಸೇರಲು ಸುರಂಗ ಪ್ರವೇಶಿಸುವ ಸ್ಥಳದಲ್ಲಿ ಮಾತ್ರ ಅಲ್ಪ ಪ್ರಮಾಣದ ಅರಣ್ಯ ಪ್ರದೇಶ ಬಳಕೆ ಮಾಡಿಕೊಳ್ಳಲಾಗುವುದು. ಯೋಜನೆ ಪೂರ್ಣಗೊಂಡ ನಂತರ ಸುರಂಗದ ಪ್ರವೇಶ ದ್ವಾರದ ಸುತ್ತಮುತ್ತ ಅರಣ್ಯ ಪುನರ್ ನಿರ್ಮಾಣವಾಗಲಿದೆ. ಈ ಸಂಬಂಧ ಈಗಾಗಲೇ ರಾಜ್ಯ ಅರಣ್ಯ ಇಲಾಖೆ, ಕೇಂದ್ರ ಅರಣ್ಯ ಇಲಾಖೆ ಹಲವು ಭಾರಿ ಸ್ಥಳ ಪರಿಶೀಲನೆ ನಡೆಸಿ ಕನಿಷ್ಠ ಗಿಡ ಮರಗಳ ಕಡಿತದೊಂದಿಗೆ ಯೋಜನೆ ಜಾರಿ ಮಾಡಲು ಕ್ರಮವಹಿಸಲಾಗಿದೆ ಎಂದು ಕಾರ್ಯಪಾಲಕ ಇಂಜಿನಿಯರ್ (ಸಿವಿಲ್) ವಿಜಯ್ ತಿಳಿಸಿದ್ದಾರೆ.

ಸಿಂಗಳೀಕಗಳ ರಕ್ಷಣೆ :ಶರಾವತಿ ಪಿಎಸ್​​​​ಪಿ ಯೋಜನೆ ಜಾರಿ ಪ್ರದೇಶದಲ್ಲಿ ಅಪರೂಪದ ಸಿಂಗಳೀಕಗಳು ಸಂಚರಿಸುತ್ತವೆ ಎಂದು ಅರಣ್ಯ ಇಲಾಖೆಯು ತಿಳಿಸಿದೆ. ಇವರುಗಳ ಸಂಚಾರಕ್ಕೆ ಸಹ ತೊಡಕಾಗದಂತೆ ಕ್ರಮ ವಹಿಸಲು ಕೆಪಿಸಿ ಮುಂದಾಗಿದೆ. ಯೋಜನೆ ಜಾರಿ ವೇಳೆ ಅರಣ್ಯ ಇಲಾಖೆ ನೇತೃತ್ವದಲ್ಲಿ ಸಿಂಗಳೀಕಗಳ ಸಂಚಾರಕ್ಕೆ ಯಾವುದೇ ಬಾದಕ ಆಗದಂತೆ ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೇಳೆ ಅನುಸರಿಸಲಾಗಿದ್ದ ಮೇಲ್ಸೆತುವೆ (ಟ್ರೇ ಕ್ಯಾನೋಪಿ)ಗಳನ್ನು ಅರಣ್ಯ ಇಲಾಖೆ, ಸೂಚನೆ, ಮಾರ್ಗದರ್ಶನ ಮತ್ತು ಮೇಲುಸ್ತುವಾರಿಯಲ್ಲಿ ನಿರ್ಮಾಣ ಮಾಡುವ ಷರತ್ತಿನೊಂದಿಗೆ ಕೆಪಿಸಿ ಯೋಜನೆ ಜಾರಿಗೆ ಮುಂದಾಗಿದೆ.

ಶರಾವತಿ ಕಣಿವೆ (ETV Bharat)
ಕನಿಷ್ಠ ನೀರಿನ ಅಗತ್ಯ : ಶರಾವತಿ ಪಿಎಸ್ಪಿ- ಪಂಪ್ಡ್ ಸ್ಟೋರೇಜ್ ಯೋಜನೆ ಆಗಿರುವ ಪರಿಣಾಮ ಅತಿ ಕಡಿಮೆ ಮತ್ತು ನೀರಿನ ದೀರ್ಘಾವಧಿ ಬಳಕೆಯೇ ಈ ಯೋಜನೆಯ ವಿಶೇಷತೆ. ಲಿಂಗನಮಕ್ಕಿ ಜಲಾಶಯದಲ್ಲಿ ವಾರ್ಷಿಕ ಸರಾಸರಿ 140 ರಿಂದ 220 ಟಿಎಂಸಿ ನೀರು ಸಂಗ್ರಹವಾಗುತ್ತದೆ. ಈ ನೀರನ್ನು ಬಳಕೆ ಮಾಡಿಕೊಂಡು ಈಗಾಗಲೇ ಜಲ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಈ ನೀರಿನ ಬಳಕೆಯಿಂದ ಜಲ ವಿದ್ಯುತ್ ಉತ್ಪಾದನೆ ನಂತರ ಕೃಷಿ, ಕುಡಿಯಲು, ಮೀನುಗಾರಿಗೆ ಸೇರಿದಂತೆ ವಿವಿಧ ರೀತಿಯಲ್ಲಿ ಸಾರ್ವಜನಿಕರು ಮತ್ತು ರೈತರು ಬಳಕೆ ಮಾಡಿಕೊಂಡ ನಂತರ ಆ ನೀರು ಸಮುದ್ರ ಸೇರುತ್ತಿದೆ. ಶರಾವತಿ ಪಿಎಸ್ಸಿ ಜಾರಿ ನಂತರವೂ ಈಗಿನ ಶರಾವತಿ ನೀರಿನ ಬಳಕೆದಾರರಿಗೆ ಯಾವುದೇ ರೀತಿಯಲ್ಲಿ ನೀರಿನ ಪ್ರಮಾಣದಲ್ಲಿ ಕೊರತೆ ಆಗುವುದಿಲ್ಲ.

ಶರಾವತಿ ಪಿಎಸ್ಪಿ ಯೋಜನೆಯಡಿ ನೀರನ್ನು ಮರುಬಳಕೆ ಮಾಡುವುದರಿಂದ ಮತ್ತು ಮುಂದಿನ 50-60 ವರ್ಷಗಳ ಅವಧಿಗೆ ಒಮ್ಮೆ ಮಾತ್ರ ಕೇವಲ 0.37 ಟಿಎಂಸಿ ನೀರನ್ನು ಬಳಕೆ ಮಾಡಲಾಗುವುದು. ಇದಕ್ಕಿಂತ ಹೆಚ್ಚಿನ ನೀರನ್ನು ಬಳಕೆ ಮಾಡಲು ಅಥವಾ ಅಣೆಕಟ್ಟೆಯ ಸಾಮರ್ಥ್ಯಕ್ಕಿಂತ ಹೆಚ್ಚಿನ ನೀರನ್ನು ಸಂಗ್ರಹಿಸಲು ಅವಕಾಶವೇ ಇಲ್ಲದಿರುವುದರಿಂದ ಎಲ್ಲೆಡೆ ಈಗಿನಂತೆಯೇ ನೀರು ಹರಿಯಲಿದೆ ಮತ್ತು ಸಮುದ್ರಕ್ಕೂ ನೀರು ಸೇರಲಿದೆ. ಹೀಗಾಗಿ ಶರಾವತಿ ಪಂಪ್ಡ್​​ ಸ್ಟೋರೇಜ್ ಯೋಜನೆಯಿಂದ ನೀರಿನ ಕೊರತೆ ಅಥವಾ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುವುದಿಲ್ಲ.

ಗುಡ್ಡ ಕುಸಿತ ಸಾಧ್ಯತೆ ಇಲ್ಲ :ಶರಾವತಿ ಪಿಎಸ್ಪಿ ಯೋಜನೆ ಜಾರಿಯಿಂದ ಗುಡ್ಡ ಕುಸಿತದ ಭೀತಿ ಬಗ್ಗೆ ಸಾರ್ವಜನಿಕರು ಆತಂಕಗೊಂಡಿರುವ ಬಗ್ಗೆಯೂ ಕೆಪಿಸಿ ಸ್ಪಷ್ಟನೆ ನೀಡಿದ್ದು, ಶರಾವತಿ ಪಿಎಸ್ಪಿ ಯೋಜನೆ ಜಾರಿಗೂ ಮುನ್ನ ಪ್ರಾಥಮಿಕ ಹಂತದಲ್ಲಿ ಕೇಂದ್ರ ಸರ್ಕಾರದ ಭಾರತೀಯ ಭೂ ಸರ್ವೇಕ್ಷಣಾ ಇಲಾಖೆಯೂ ಈ ಪ್ರದೇಶದಲ್ಲಿ ಸರ್ವೆ ಕಾರ್ಯ ನಡೆಸಿದ್ದು, ಪಿಎಸ್ಪಿ ಜಾರಿ ಪ್ರದೇಶದಲ್ಲಿ ಸುರಂಗ ನಿರ್ಮಾಣ ಅಥವಾ ಕಾಮಗಾರಿಯಿಂದ ಭೂ ಕುಸಿತ ಸಾಧ್ಯತೆ ಆಗುವುದಿಲ್ಲ ಎಂಬುದನ್ನು ದೃಢೀಕರಿಸಿದ ನಂತರವೇ ಯೋಜನೆಗೆ ಅನುಮತಿ ನೀಡಿರುತ್ತದೆ. ಹೀಗಾಗಿ ಇಲ್ಲಿ ಗುಡ್ಡ ಕುಸಿತ ಸಾಧ್ಯತೆಗಳೂ ಇರುವುದಿಲ್ಲ.

ಜಲಾಶಯ (ETV Bharat)
ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆ ಸಾಧ್ಯ : ಶರಾವತಿ ಪಂಪ್ಡ್​​ ಸ್ಟೋರೇಜ್ ಯೋಜನೆಯಡಿ 2000 ಮೆಘಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ. ಹಗಲು ವೇಳೆ ನವೀಕರಿಸಬಹುದಾದ ಇಂಧನ ಹೇರಳವಾಗಿ ಲಭ್ಯವಾಗಲಿದ್ದು, ಈ ಸಮಯದಲ್ಲಿ ಕೆಳಗಿನ ಜಲಾಶಯದಿಂದ ಮೇಲಿನ ಜಲಾಶಯಕ್ಕೆ ನೀರು ಪಂಪ್ ಮಾಡಲಾಗುವುದು. ಹೆಚ್ಚು ಬೇಡಿಕೆ ಅವಧಿಯಲ್ಲಿ ಅಥವಾ ರಾತ್ರಿ ವೇಳೆ ವಿದ್ಯುತ್ ಉತ್ಪಾದಿಸಿ ಗ್ರಾಹಕರಿಗೆ ಪೂರೈಸಲಾಗುವುದು. ಹೀಗೆ, ಸೋಲಾರ್ ಮತ್ತು ಗಾಳಿಯಿಂದ ಉತ್ಪಾದನೆಯಾಗುತ್ತಿರುವ ವಿದ್ಯುತ್ ವ್ಯರ್ಥವಾಗದಂತೆ ಉಳಿಸಿಕೊಂಡು ಅದನ್ನು ಬೇಡಿಕೆ ಅವಧಿಯಲ್ಲಿ ತ್ವರಿತವಾಗಿ ಉತ್ಪಾದಿಸಿ ಗ್ರಾಹಕರಿಗೆ ಸರಬರಾಜು ಮಾಡಲು ಪಿಎಸ್ಪಿಗಳಿಂದ ಮಾತ್ರ ಸಾಧ್ಯವಾಗಲಿದೆ.

ಇಲ್ಲಿ ಪಿಎಸ್ಪಿಗಳನ್ನು “ನೀರಿನ ಬ್ಯಾಟರಿ' ಎಂದು ಕರೆಯಬಹುದಾಗಿದೆ. ಇನ್ನು ಯಾವುದೇ ವಿದ್ಯುತ್ ಸಂಗ್ರಹ ವ್ಯವಸ್ಥೆಯಲ್ಲಿ ವಿದ್ಯುತ್ ನಷ್ಟ ಇರುತ್ತದೆ. ಹೀಗಾಗಿಯೇ ಪಿಎನ್‌ಪಿಗಳಲ್ಲಿ ವಿದ್ಯುತ್ ಉತ್ಪಾದನೆಗಿಂತ ಅಧಿಕ ಮೊತ್ತದ ವಿದ್ಯುತ್ ಬಳಕೆ ಆದರೂ ಸಹ ಪಿಎಸ್ಪಿಗಳ ನಿರ್ಮಾಣ-ನಿರ್ವಹಣೆ ನಂತರವೂ ಅತಿ ಕಡಿಮೆ ದರದಲ್ಲಿ ವಿದ್ಯುತ್ ಉತ್ಪಾದನೆ ಆಗಲಿದೆ. ಹೀಗಾಗಿಯೇ, ಜಗತ್ತಿನಾದ್ಯಂತ ಪಿಎಸ್ಸಿಗಳನ್ನು ವಿದ್ಯುತ್ ಸಂಗ್ರಹದ ಶ್ರೇಷ್ಠ ಪದ್ಧತಿ ಎಂದು ಕರೆಯಲಾಗುತ್ತಿದೆ.

ಅತೀ ಕಡಿಮೆ ಭೂಮಿ ಬಳಕೆ :2000 ಮೆಘಾ ವ್ಯಾಟ್ ವಿದ್ಯುತ್ ಉತ್ಪಾದನೆಗೆ ಅತೀ ಕಡಿಮೆ ಭೂಮಿ ಬಳಕೆ ಮಾಡಿಕೊಳ್ಳುತ್ತಿರುವುದು ಶರಾವತಿ ಪಿಎಸ್ಪಿ ಯೋಜನೆಯ ಮತ್ತೊಂದು ಮಹತ್ವದ ಅಂಶವಾಗಿದೆ. ಈ ಯೋಜನೆಯಡಿ ಕೇವಲ 100.645 ಹೆಕ್ಟೇರ್ ಪ್ರದೇಶ (248.7 ಎಕರೆ ಪ್ರದೇಶ)ವನ್ನು ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಈ ಪೈಕಿ 54.155 ಹೆಕ್ಟೇರ್ ಅರಣ್ಯ ಪ್ರದೇಶವಾಗಿದ್ದರೆ, 46.49 ಹೆಕ್ಟೇರ್ ಅರಣ್ಯೇತರ ಪ್ರದೇಶವಾಗಿದೆ. ಅರಣ್ಯ ಪ್ರದೇಶ ಬಳಕೆ ವೇಳೆ ಕೈಗೊಳ್ಳಲಾಗುವ ಮುನ್ನೆಚ್ಚರಿಕೆ ಕ್ರಮಗಳನ್ನು ಕೆಪಿಸಿ ಕೈಗೊಳ್ಳಲಿದೆ ಮತ್ತು ಈ ಬಗ್ಗೆ ಅರಣ್ಯ ಇಲಾಖೆ, ವನ್ಯಜೀವಿ ಮಂಡಳಿಗಳೂ ಸಹ ಸೂಕ್ತ ಸಮಯದಲ್ಲಿ ಮೇಲುಸ್ತುವಾರಿ, ಪರಿಶೀಲನೆ, ಪರಾಮರ್ಶೆ ನಡೆಸಲಿವೆ. ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದಂತೆ ಕೆಪಿಸಿ ಇತರೆಡೆ ಅರಣ್ಯ ಪ್ರದೇಶ ಪುನರ್ ಸ್ಥಾಪಿಸಲು ಅರಣ್ಯ ಇಲಾಖೆಗೆ ಸ್ವಾಧೀನದಷ್ಟೇ ಪ್ರದೇಶ ಮತ್ತು ಅರಣ್ಯ ಪುನರ್ ಸ್ಥಾಪನೆಗೆ ತಗಲುವ ವೆಚ್ಚವನ್ನೂ ನೀಡುತ್ತಿದೆ.

ಸಾರ್ವಜನಿಕ ಪರಾಮರ್ಶೆಗೆ ದಾಖಲೆ ಲಭ್ಯ : 'ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಸರ್ಕಾರದ ಯೋಜನೆ ಆಗಿದೆ ಮತ್ತು ಈ ಯೋಜನೆ ಜಾರಿ ಏನು? ಎತ್ತ? ಎಂಬ ಬಗ್ಗೆ ಸಾರ್ವಜನಿಕರಿಗೆ ತಿಳಿಸುವ ಸಲುವಾಗಿ ಯೋಜನೆ ಜಾರಿ ವ್ಯಾಪ್ತಿಯ ಜಿಲ್ಲೆಗಳ ಸಂಬಂಧಿತ ಜಿಲ್ಲಾಧಿಕಾರಿ ಕಚೇರಿ ಹಾಗೂ ಪಂಚಾಯ್ತಿ ಕಚೇರಿಗಳಲ್ಲಿ ಯೋಜನೆಯ ಖಾಸಗಿ ಮತ್ತು ಭದ್ರತೆ ದೃಷ್ಟಿಯ ವಿವರಗಳ ಹೊರತಾಗಿ ಸಮರ್ಪಕ ವಿವರಗಳುಳ್ಳ ಪರಿಸರ ಪರಿಣಾಮ ಮೌಲ್ಯಮಾಪನ ವರದಿಗಳನ್ನು ಈ ಕಚೇರಿಗಳಲ್ಲಿ ಇರಿಸಲಾಗಿದೆ. ಇದರ ಸಾಫ್ಟ್ ಕಾಪಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವೆಬ್‌ಸೈಟ್‌ನಲ್ಲೂ ಲಭ್ಯವಿದೆ. ಸಾರ್ವಜನಿಕರು ಈ ವಿವರಗಳನ್ನು ಖುದ್ದು ಪರಿಶೀಲಿಸಲು ಅವಕಾಶ ಮಾಡಿಕೊಡಲಾಗಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬಹುದು. ಹೀಗಾಗಿ, ಕರ್ನಾಟಕ ಸರ್ಕಾರದಿಂದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಮೂಲಕ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿದಂತ ಪರಿಸರವಾದಿಗಳು, ಹೋರಾಟಗಾರರು ಮಾತ್ರವಲ್ಲದೇ, ಸ್ಥಳೀಯರಿಗೂ ಯಾವುದೇ ಆತಂಕ ಬೇಡ' ಎಂದು ಕೆಪಿಸಿಎಲ್​​ನ ಮುಖ್ಯ ಇಂಜಿನಿಯರ್ ರಮೇಶ್ ತಿಳಿಸಿದ್ದಾರೆ.

ಪಂಪ್ಡ್ ಸ್ಟೋರೇಜ್ ಯೋಜನೆ ಎಂದರೇನು? : ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಜಗತ್ತಿನ ಅತಿದೊಡ್ಡ ಬ್ಯಾಟರಿ ತಂತ್ರಜ್ಞಾನವೆಂದು ಪರಿಗಣಿಸಲಾಗುತ್ತಿದೆ. ಇದನ್ನು ಎರಡು ಜಲಾಶಯಗಳ ಮಧ್ಯೆ ಕಾರ್ಯಗತಗೊಳಿಸಲಾಗುತ್ತದೆ. ಹೆಚ್ಚುವರಿ ವಿದ್ಯುತ್ ಇದ್ದಾಗ ನೀರನ್ನು ಕೆಳಗಿನ ಜಲಾಶಯದಿಂದ ಮೇಲಿನ ಜಲಾಶಯಕ್ಕೆ ಪಂಪ್ ಮಾಡಿ ಶೇಖರಿಸಲಾಗುತ್ತದೆ. ವಿದ್ಯುತ್ ಬೇಡಿಕೆ ಹೆಚ್ಚಾದಾಗ ಆ ನೀರನ್ನು ಬಳಸಿ ವಿದ್ಯುತ್ ಉತ್ಪಾದಿಸಿ ಪೂರೈಸಲಾಗುತ್ತದೆ. ಇದಕ್ಕಾಗಿ ಹೊಸ ಜಲಾಶಯಗಳನ್ನು ನಿರ್ಮಿಸುವ ಅಗತ್ಯವಿಲ್ಲ. ಹೆಚ್ಚು ಬೇಡಿಕೆ ಅವಧಿಯಲ್ಲಿ ವಿದ್ಯುತ್ ಉತ್ಪಾದಿಸಲು ಅನುಕೂಲವಾಗುವುದರಿಂದ ಇದು ಗ್ರಿಡ್ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

30/08/2025
16/08/2023

ವಿಶ್ವ ವಿಖ್ಯಾತ ಜೋಗ ಜಲಪಾತದ ಸಮೀಪ #ಸಿದ್ದಾಪುರದ #ಮಾವಿನಗುಂಡಿಯಲ್ಲಿ ಅತಿ ವಿಶಿಷ್ಟ ಸ್ಮಾರಕವೊಂದನ್ನು ರೂಪಿಸಲಾಗಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ ನಿರಾಕರಣೆ ಚಳುವಳಿಯಲ್ಲಿ ಪಾಲ್ಗೊಂಡು ಬ್ರಿಟೀಷರಿಂದ ಸೆರೆವಾಸ ಅನುಭವಿಸಿದ ಗ್ರಾಮೀಣ ಮಹಿಳೆಯರ ದಿಟ್ಟ ಹೋರಾಟದ ಸತ್ಯದ ಚಿತ್ರಣ ಈ ಸ್ಮಾರಕದ ಪ್ರಮುಖ ತಿರುಳಾಗಿದೆ.

ಜೋಗದಿಂದ ಕೇವಲ ೪ ಕಿ.ಮೀ.ದೂರದ ಮಾವಿನಗುಂಡಿ ಈಗ ಪ್ರವಾಸಿಗರ ಸಂದರ್ಶನಾ ಸ್ಥಳವಾಗಿ ಬದಲಾಗಿದೆ. ಜೋಗ-ಹೊನ್ನಾವರ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ ೨೦೬ ರಲ್ಲಿ ಹೆದ್ದಾರಿಗೆ ಹೊಂದಿಕೊಂಡಿರುವ ಈ ಸ್ಮಾರಕ ಆಕರ್ಷಕ ರಚನೆಯಿಂದ ಬಹು ದೂರದಿಂದಲೇ ಪ್ರವಾಸಿಗರನ್ನು ಸೆಳೆಯುವಂತಿದೆ.

ಕರ್ನಾಟಕ ಅರಣ್ಯ ಇಲಾಖೆಗೆ ಸೇರಿದ ಈ ಸ್ಥಳದಲ್ಲಿ ಬಹು ವರ್ಷಗಳ ಹಿಂದೆ ಪೋಲೀಸ್ ಹೊರಠಾಣೆ ಇತ್ತು. ಈ ಠಾಣೆ ರದ್ದಾದ ನಂತರ ಕಟ್ಟಡ ಬಳಕೆಯಿಲ್ಲದೆ ಶಿಥಿಲಗೊಂಡು ಹಂಚು ಮತ್ತು ಕಲ್ಲುಗಳು ಉದುರಿ ಬಿದ್ದು ಅಳಿದು ಹೋಗುವ ಹಾದಿಯಲ್ಲಿತ್ತು.

ಈ ಸ್ಥಳವನ್ನು ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆ ಶಿರಸಿ ವಿಭಾಗ ಮತ್ತು ಬೆಂಗಳೂರಿನ ಪಶ್ಚಿಮಘಟ್ಟ ಕಾರ್ಯಪಡೆ ಜಂಟಿಯಾಗಿ ಈ ಸ್ಥಳದಲ್ಲಿ ವಿಶಿಷ್ಟ ಸ್ಮಾರಕ ಹಾಗೂ ಆಕರ್ಷಕ ಪುತ್ತಳಿಗಳನ್ನು ನಿರ್ಮಿಸಲು ಕಾರ್ಯಪ್ರವೃತ್ತವಾಯಿತು. ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ ಹಾಗೂ ಕರ ನಿರಾಕರಣೆಯಲ್ಲಿ ಮಹಿಳೆಯರ ದಿಟ್ಟ ಹೋರಾಟವನ್ನು ಪ್ರಚುರಪಡಿಸುವುದು ಈ ಸ್ಮಾರಕ ಮುಖ್ಯ ಧ್ಯೇಯವಾಗಿದೆ.

೧೯೩೦ ರಿಂದ ೧೯೩೫ ರವರಗೆ ದೇಶದಲ್ಲೆಲ್ಲೆಡೆ ಕರ ನಿರಾಕರಣೆ ಮತ್ತು ಅಸಹಕಾರ ಚಳುವಳಿ ಜೋರಾಗಿತ್ತು. ಬೆಂಗಳೂರು ಸನಿಹದ ಕನಕಪುರದ ವೆಂಕಟರಾಮಯ್ಯ ಮತ್ತು ಅವರ ಪತ್ನಿ ಗೌರಮ್ಮ ೪-೫ ವರ್ಷಗಳ ಕಾಲ ಸಿದ್ದಾಪುರದಲ್ಲಿ ನೆಲೆಸಿ ಸುತ್ತಮುತ್ತ ಗ್ರಾಮೀಣ ಪ್ರದೇಶದಲ್ಲಿ ಚಳುವಳಿ ಚುರುಕುಗೊಳಿಸಿದರು. ಸಿದ್ದಾಪುರ, ತಡಗಳಲೆ, ಕಾನಲೆ, ದೊಡ್ಮನೆ, ತ್ಯಾಗಲಿ,ಹಣಜಿಬೈಲು, ಕುಳಿಬೀಡು,ಗುಂಜಗೋಡು,ಹೊಸಕೊಪ್ಪ, ಹೆಗ್ಗಾರು ಇತ್ಯಾದಿ ಪ್ರದೇಶದಲ್ಲಿ ಪುರುಷರಷ್ಟೇ ಅಲ್ಲ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಚಳುವಳಿಯಲ್ಲಿ ಧುಮುಕಿದರು.

ಈ ಸಮಯದಲ್ಲಿ ಮಾವಿನಗುಂಡಿಯಲ್ಲಿ ನಡೆದ ಮಹಿಳೆಯರ #ಉಪವಾಸ_ಸತ್ಯಾಗ್ರಹ #ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ೧೯೩೨ರ ಮೇ ೧೮ ರಂದು ಆಗಿನ ಆಂಗ್ಲ ಸರ್ಕಾರಕ್ಕೆ ಕರ ನೀಡದ ರೈತರ ಎಮ್ಮೆಗಳನ್ನು ರಸ್ತೆ ಕಾಮಗಾರಿ ಹೊಣೆ ಹೊತ್ತ ಓರ್ವ ಕಾರಕೂನ ಹಾಗೂ ಒಬ್ಬ ಹವಾಲ್ದಾರ್ ವಶಪಡಿಸಿಕೊಂಡು ಸಾಗಿಸಿದರು. ಇದನ್ನು ಪ್ರತಿಭಟಿಸಿ #ಬಸುರಿ, #ಬಾಣಂತಿ, ವಯೋವೃದ್ಧ ಮಹಿಳೆಯರೂ ಸೇರಿ ಹಲವರು ಉಪವಾಸ ಸತ್ಯಾಗ್ರಹ ಆರಂಭಿಸಿದರು. #ತ್ಯಾಗಲಿ ಭುವನೇಶ್ವರಮ್ಮ (೩೨ ದಿನ ಉಪವಾಸ), #ಕಲ್ಲಾಳ ಲಕ್ಷ್ಮಮ್ಮ (೨೨ ದಿನ ಉಪವಾಸ) ನಡೆಸಿದರು. ಇವರ ಜೊತೆಗೆ ಪ್ರತಿ ದಿನ ಸರತಿಯಂತೆ #ದೊಡ್ಮನೆ ಮಹಾದೇವಮ್ಮ , #ಕುಳಿಬೀಡು ಗಣಪಮ್ಮ , #ಹಣಜಿಬೈಲು ದುಗ್ಗಮ್ಮ, ಕುಳಿಬೀಡು ಭಾಗೀರಥಮ್ಮ,ಕಲ್ಲಾಳ ಕಾವೇರಮ್ಮ, #ಹೊಸಕೊಪ್ಪ ಸೀತಮ್ಮ, #ಗುಂಜಗೋಡು ಮಾದೇವಮ್ಮ, #ಹೆಗ್ಗಾರು ದೇವಮ್ಮ ಉಪವಾಸ ಸತ್ಯಾಗ್ರಹ ನಡೆಸಿದ ದಾಖಲೆ ಇದೆ. ಈ ಸ್ಮಾರಕದ ಫಲಕದಲ್ಲಿ ಇವರುಗಳ ಕಾರ್ಯವನ್ನು ಸ್ಮರಿಸಿ ಈಗ ಈ ಸ್ಥಳದಲ್ಲಿ ಶಾಸನ ಬರೆಯಲಾಗಿದೆ.
(ರಂಗನಾಥ ದಿವಾಕರ ಅವರ ಕರನಿರಾಕರಣೆಯ ವೀರ ಕಥೆ ಎಂಬ ಪುಸ್ತಕದಲ್ಲಿ ಇಲ್ಲಿನ ಚಳಿವಳಿಯ ವಿವರ ದಾಖಲಾಗಿದೆ.)

ಇಲ್ಲಿನ ಈ ವಿಶಿಷ್ಟಪೂರ್ಣ ಸ್ಮಾರಕದಲ್ಲಿ ಮಹಿಳಾ ಸತ್ಯಾಗ್ರಹಿಗಳ ಮೂರ್ತಿ ರಚಿಸಲಾಗಿದೆ. ಘಟನೆಯ ದೃಶ್ಯವನ್ನು ಬಿಂಬಿಸಲಾಗಿದೆ. ಮಹಿಳೆಯರನ್ನು ಕಾರಾಗ್ರಹಕ್ಕೆ ಹಾಕಿದ ದೃಶ್ಯ ರೂಪಿಸಲಾಗಿದೆ. ಹುಬ್ಬಳಿಯ ಉತ್ಸವ್ ರಾಕ್ ಗಾರ್ಡನ್ ನ ಕಲಾವಿದರು ಇಲ್ಲಿ ದುಡಿದು ನೈಜತೆಯ ಚಿತ್ರಣ ನೀಡಿದ್ದಾರೆ.

೨ (2012) ವರ್ಷಗಳ ಹಿಂದೆ ಶಿರಸಿ ಅರಣ್ಯ ವಿಭಾಗದ ಆಗಿನ ಡಿ.ಎಫ್.ಓ .ಆಗಿದ್ದ ಮನೋಜ್ ಕುಮಾರ್ ತ್ರಿಪಾಠಿ ಹಾಗೂ ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಇವರ ಸತತ ಪ್ರಯತ್ನದಿಂದ ಈ ಸ್ಮಾರಕ ರೂಪುಗೊಳ್ಳುವಂತಾಗಿದೆ. ಸ್ಮಾರಕದ ಸನಿಹವೇ ವನ ದೇವತೆ ಮೂರ್ತಿ, ಕಾರಂಜಿ, ಕೊಕ್ಕರೆ ಇತ್ಯಾದಿ ಪಕ್ಷಿಗಳ ಓಡಾಟದ ಭಂಗಿ ಇತ್ಯಾದಿ ರೂಪಿಸಲಾಗುತ್ತಿದೆ. ಈ ವರಗೆ ಸುಮಾರು ೯ ಲಕ್ಷ ರೂ.ವೆಚ್ಚ ಮಾಡಲಾಗಿದ್ದು ಇನ್ನೂ ಹಲವು ಕಾಮಗಾರಿಗಳು ನಡೆಯುತ್ತಲೇ ಇದೆ.
ಜೋಗಕ್ಕೆ ಆಗಮಿಸಿದ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡಿದರೆ ಕರ ನಿರಾಕರಣೆ ಚಳುವಳಿಯ ರೋಮಾಂಚನಕಾರಿ ಅನುಭವವಾಗುತ್ತದೆ.
ಕೃಪೆ : ಎನ್.ಡಿ.ಹೆಗಡೆ
Repost
#ಸ್ವಾತಂತ್ರ್ಯಹೋರಾಟದಲ್ಲಿಸಿದ್ದಾಪುರ
Siddapur 581355 ನೆಮ್ಮದಿಯ ತವರೂರು

Address

Jog Falls �
Sagar
577435

Alerts

Be the first to know and let us send you an email when Jog falls posts news and promotions. Your email address will not be used for any other purpose, and you can unsubscribe at any time.

Share

Category