17/08/2026
ಪಾದರಸದಂತ ವ್ಯಕ್ತಿತ್ವದ ಸಾಗರ ತಾಲೂಕು ಅಧ್ಯಕ್ಷರಾದ ಡಾ.ರಾಮಚಂದ್ರಪ್ಪ ಮನೆಘಟ್ಟ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು .
ಮಲೆನಾಡಿನ ಮಡಿಲಾದ ಸಾಗರ ತಾಲೂಕಿನ ಮನೆಘಟ್ಟ ಎಂಬ ಸಣ್ಣ ಗ್ರಾಮದಲ್ಲಿ ಜನಿಸಿದ ಶ್ರೀ ರಾಮಚಂದ್ರಪ್ಪನವರು , ತಮ್ಮ ಶ್ರಮ, ಛಲ ಮತ್ತು ನಿಷ್ಠೆಯಿಂದ ಜೀವನದಲ್ಲಿ ಉನ್ನತ ಎತ್ತರಕ್ಕೇರಿದ ಅಪರೂಪದ ಸಾಧಕರು.
1989ರಲ್ಲಿ 'ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್' ಶಿಕ್ಷಣವನ್ನು ಸಾಗರದ ಸಂಜಯ್ ಮೆಮೋರಿಯಲ್ ಪಾಲಿಟೆಕ್ನಿಕ್ ನಲ್ಲಿ ಪೂರ್ಣಗೊಳಿಸಿದ ಇವರು, ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಿದ್ದು ಮಹಾರಾಷ್ಟ್ರದ ಪುಣೆಯಲ್ಲಿ.
ಪರಿಚಿತರೊಬ್ಬರ ಮಾರ್ಗದರ್ಶನದಲ್ಲಿ ಪುಣೆಯ ಪ್ರಸಿದ್ಧ 'ದೀವಗಿ ಮೆಟಲ್ವೇರ್ (Divgi Metalware Pvt Ltd)' ಕಂಪನಿಗೆ ಇಂಜಿನಿಯರ್ ಆಗಿ ಸೇರ್ಪಡೆಗೊಂಡ ಇವರು, ತಮ್ಮ ದಕ್ಷತೆಯಿಂದ ಬಡ್ತಿ ಪಡೆಯುತ್ತಾ 'ಅಸಿಸ್ಟೆಂಟ್ ಮ್ಯಾನೇಜರ್' ಹುದ್ದೆಯವರೆಗೆ ಬೆಳೆದರು. ಇದೇ ಸಂಸ್ಥೆಯಲ್ಲಿ ಸುಮಾರು 30ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿದ ಸುದೀರ್ಘ ಹಾಗೂ ಶ್ರೇಷ್ಠ ಸೇವೆ ಅವರ ವೃತ್ತಿಪರತೆಗೆ ಹಿಡಿದ ಕನ್ನಡಿ.
ತಮ್ಮ ಸುದೀರ್ಘ ಅನುಭವದ ನಂತರ, 'ಬಿಗ್ ವಿಷನ್ ವಾಟರ್ಟೇಕ್ (Big Vision Watertake Pvt Ltd)' ಕಂಪನಿಯ ಸಂಸ್ಥಾಪಕ ಸದಸ್ಯರಾಗಿ (Founder Member) ಜವಾಬ್ದಾರಿ ವಹಿಸಿಕೊಂಡರು. ಈ ಸಂಸ್ಥೆಯನ್ನು ಅತ್ಯಂತ ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು, ಭಾರತದ ಸುಮಾರು 10 ರಿಂದ 12 ರಾಜ್ಯಗಳಲ್ಲಿ ಸಂಸ್ಥೆಯ ಬ್ರಾಂಡ್ ಹಾಗೂ ಸೇವೆಯನ್ನು ಯಶಸ್ವಿಯಾಗಿ ವಿಸ್ತರಿಸಿದರು.
ಉದ್ಯಮ ರಂಗದಲ್ಲಿ ಮತ್ತಷ್ಟು ಸಾಧಿಸುವ ಹಂಬಲದಿಂದ 2017 ರಲ್ಲಿ ಪುಣೆಯಲ್ಲಿ ಸ್ವತಃ 'ರೆಡೆರಾ ಇಂಡಿಯಾ (Redera India Pvt Ltd)' ಎಂಬ ಕಂಪನಿಯನ್ನು ಹುಟ್ಟುಹಾಕಿದರು. ಇವರ ಈ ಸಾಧನೆ ಮತ್ತು ಉದ್ಯಮಶೀಲತೆಯನ್ನು ಗುರುತಿಸಿ, 2017ರಲ್ಲಿ 'ಮಾರ್ಕೆಟಿಂಗ್ ಫೀಲ್ಡ್'ನಲ್ಲಿ ಗೌರವ ಡಾಕ್ಟರೇಟ್ ಪದವಿ ಲಭಿಸಿತು. ಜೊತೆಗೆ ಪುಣೆಯಲ್ಲಿ ಅತ್ಯಂತ ಗೌರವಾನ್ವಿತ 'ಸಂಘರ್ಷ ನಾಯಕ' ಪ್ರಶಸ್ತಿಗೂ ಇವರು ಭಾಜನರಾದರು.
ನಗರ ಜೀವನದಲ್ಲಿ ಯಶಸ್ಸಿನ ಶಿಖರವೇರಿದರೂ, ತಮ್ಮ ಹುಟ್ಟೂರಿನ ಮಣ್ಣಿನ ಋಣ ತೀರಿಸಬೇಕೆಂಬ ಉದಾತ್ತ ಚಿಂತನೆಯಿಂದ 05:08:2020 ರಲ್ಲಿ ಜನ್ಮಭೂಮಿಯಾದ ಸಾಗರಕ್ಕೆ ಮರಳಿದರು.
ಪ್ರಸ್ತುತ "ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ (ಶಿವಮೊಗ್ಗ ಜಿಲ್ಲೆ)"ಯ ಸಾಗರ ತಾಲೂಕು ಘಟಕದ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದು, ರೈತರ ಹಕ್ಕುಗಳಿಗಾಗಿ ಹಾಗೂ ಅವರ ಏಳಿಗೆಗಾಗಿ ಸದಾ ಮುಂಚೂಣಿಯಲ್ಲಿ ನಿಂತು ಜನಸೇವೆ ಮಾಡುತ್ತಿದ್ದಾರೆ.
ಇದೆಲ್ಲದರ ನಡುವೆ ಕಳೆದ 20 ವರ್ಷಗಳಿಂದ ಕೃಷ್ಣಪ್ರಜ್ಞೆಯಲ್ಲಿ ತೊಡಗಿ ಇಸ್ಕಾನ್ ನಲ್ಲಿ ಪ್ರಭುಪಾದ ಆಶ್ರಯ ಮತ್ತು ಶ್ರೀ ಜಯಪತಾಕ ಸ್ವಾಮೀಜಿಯ ಗುರು ಆಶ್ರಯ ಪಡೆದುಕೊಂಡಿರುತ್ತಾರೆ. ಹಾಗೂ ನಿರಂತರವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ತಾಂತ್ರಿಕ ಜ್ಞಾನ, ಸುದೀರ್ಘ ಉದ್ಯಮದ ಅನುಭವ ಹಾಗೂ ಸಮಾಜಮುಖಿ ಕಳಕಳಿಯನ್ನು ಮೈಗೂಡಿಸಿಕೊಂಡಿರುವ ಡಾ.ರಾಮಚಂದ್ರಪ್ಪ ಮನೆಘಟ್ಟನವರು ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದ್ದಾರೆ.
ಭಗವಂತನು ಅವರಿಗೆ ಆಯುರ್ ಆರೋಗ್ಯ ನೀಡಿ ಇನ್ನಷ್ಟು ಜನರ,ರೈತರ ಸೇವೆ ಮಾಡುವ ಭಾಗ್ಯ ನೀಡಲಿ ಅಂತ ಹಾರೈಸುತ್ತೇವೆ.
#ಶಿವಮೊಗ್ಗ_ಜಿಲ್ಲಾ_ರೈತಸಂಘ
#ಸಾಗರ