24/07/2021
#ಸಾಧಕರ_ಕಥೆ-40
#ಸಾಧಕರ_ಹಾದಿ ಜೊತೆ
#ಆರ್ಯನ್ ಇವರ
#ಸಾಧನೆಯ_ಕಥೆ
ಬರಹ: ಸಾಯಿ ದೀಕ್ಷಿತ್ ಪುತ್ತೂರು
#ಸಾಧಕರ_ಹಾದಿ
ಮಾತು ಬರದ ಮೂಖ ಮಾತನಾಡಬೇಕು ಎಂಬ ಕನಸು ಹೊತ್ತರೆ, ಮಾತೇ ಕೇಳದಿರುವ ಕಿವುಡ ಮಾತುಗಳನ್ನು ಆಲಿಸುವ ನಾಳೆಯನ್ನು ಕಂಡರೆ, ಕಣ್ಣೇ ಕಾಣದಿರುವ ಕುರುಡ ಈ ಜಗತ್ತು ಹೇಗಿರಬಹುದು ಎಂಬ ಕಲ್ಪನೆಯಲ್ಲಿ ಕಾಣುವುದನ್ನು ಕಾಯುತ್ತಿರುತ್ತಾನೆ. ಹಾಗೆಯೇ ಸಾಧನೆ ಎಂಬ ಕನಸನ್ನು ಹೊತ್ತವರು ಬಾಯಿ, ಕಣ್ಣು, ಕಿವಿ ಎಲ್ಲವನ್ನೂ ತೊರೆದು ಕತ್ತಲೆಯ ಕೋಣೆಯಲ್ಲಿ ಬಿಟ್ಟಂತೆ ಸರಿಯಾದ ಸಾಧನೆಯ ಮೆಟ್ಟಿಲನ್ನು ಹುಡುಕಿ ಸಾಧಿಸುತ್ತಾರೆ. ಅಂತಹ ದೊಡ್ಡ ಸಾಧಕರಲ್ಲಿ ಒಬ್ಬರಾದ "ವೇಷದಾರಿ ಆರ್ಯನ್" ಇವರ ಸಾಧನೆಯ ಕಥೆ.
ಇವರು ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಶ್ರೀ ಬಿ.ಗಂಗಾಧರ ಮತ್ತು ಶ್ರೀಮತಿ ಶಾಲಿನಿ ಇವರ ಜೇಷ್ಠ ಪುತ್ರನಾಗಿ ಫೆಬ್ರವರಿ 11ರಂದು ಜನಿಸಿದರು. ಇವರ ತಂದೆ ತಾಯಿಗೆ ಇಬ್ಬರು ಗಂಡು ಮಕ್ಕಳು. ಇವರು ಮೊದಲನೇ ಮಗ.
ಇವರು ಪ್ರಾಥಮಿಕ ಶಿಕ್ಷಣವನ್ನು ಲಿಟಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆ, ಪ್ರೌಢ ಶಿಕ್ಷಣವನ್ನು ಸಂತ ಫಿಲೋಮಿನ ಬಾಲಕರ ಪ್ರೌಢ ಶಾಲೆ ಪುತ್ತೂರು, ಪದವಿಪೂರ್ವ ಮತ್ತು ಪದವಿ ಶಿಕ್ಷಣವನ್ನು ಸಂತ ಫಿಲೋಮಿನ ಪದವಿ ಪೂರ್ವ ಕಾಲೇಜ್ ಪುತ್ತೂರು ಮತ್ತು ಎಂ. ಬಿ. ಎ. ಶಿಕ್ಷಣವನ್ನು ಬೆಂಗಳೂರಿನಲ್ಲಿ ಮುಗಿಸಿ, ಕೆನರಾ ಬ್ಯಾಂಕ್ ಇದರ ಐ.ಟಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಪ್ರಸ್ತುತ ಸಂಪೂರ್ಣವಾಗಿ ಸಿನಿಮಾ ರಂಗದಲ್ಲಿ ನಟನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಇವರ ತಂದೆ ಗ್ರಾಮ ಲೆಕ್ಕಧಿಕಾರಿಯಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ತಾಯಿ ಗೃಹಿಣಿಯಾಗಿದ್ದಾರೆ. ಇವರು ತನ್ನ ಬಾಲ್ಯದಲ್ಲಿ ಮೊಟ್ಟ ಮೊದಲು ವಿಷ್ಣುವರ್ಧನ್ ಅವರ ಸಿನಿಮಾ ನೋಡಿದಾಗಿನಿಂದ, ಸಿನಿಮಾದಲ್ಲಿ ಆಸಕ್ತಿ ಹುಟ್ಟಿತು. ಸಿನಿಮಾ ಹಾಡು ಹಾಕಿಕೊಂಡು ಡಾನ್ಸ್ ಮಾಡುವುದು, ಟಿವಿಯಲ್ಲಿ ಬರುವ ಡಾನ್ಸ್, ಫೈಟ್ ಗಳನ್ನು ಅನುಕರಣೆ ಮಾಡುವುದನ್ನು ರೂಢಿ ಮಾಡಿಕೊಂಡರು. ಪುತ್ತೂರಿಗೆ ಒಮ್ಮೆ ಚಲನ ಚಿತ್ರ ನಟ ವಿಷ್ಣುವರ್ಧನ್ ಬಂದಾಗ ಸ್ಟೇಜ್ ಗೆ ಹೋಗಿ ವಿಷ್ಣುವರ್ಧನ್ ಅವರನ್ನು ಮಾತಾಡಿಸಬೇಕೆಂದು ಹಠ ಹಿಡಿದ ಸನ್ನಿವೇಶವನ್ನು ಇಂದಿಗೂ ಹೆತ್ತವರು ಇವರಿಗೆ ನೆನಪಿಸುತ್ತಾರೆ. ಇವರಿಗೆ ಸಿನಿಮಾ ನೋಡುವ ಹುಚ್ಚು. ನೋಡುವುದಕ್ಕೆ ಕೂತರೆ ಏಳುವುದಿಲ್ಲ ಎಂಬ ಕಾರಣಕ್ಕೆ, ಭಾನುವಾರ ಸಂಜೆ ಬೆಂಗಳೂರು ದೂರದರ್ಶನದಲ್ಲಿ ಸಂಜೆ 4ಗಂಟೆಗೆ ಪ್ರಸಾರವಾಗುತಿದ್ದ ಫಿಲಂ ನೋಡಬೇಕಾದರೆ, ಹೋಮ್ ವರ್ಕ್ ಹಾಗೂ ಓದುವ ಕೆಲಸ ಆಗಿರಬೇಕು ಎಂದು ಹೆತ್ತವರು ಕಂಡೀಶನ್ ಹಾಕಿದ್ದರು. , ಅದಕ್ಕಾಗಿ ಭಾನುವಾರ 4ಗಂಟೆಯ ಒಳಗೆ ಓದು, ಕೆಲಸ ಏನೇ ಇದ್ದರೂ ಬೇಗನೆ ಮುಗಿಸಿ ಟೀವಿ ಮುಂದೆ ಕಾಯುತ್ತಿದ್ದರು.
ಸಿನಿಮಾ ನೋಡುತ್ತಾ ನೋಡುತ್ತಾ ಉಪೇಂದ್ರ ಅವರ ಉದ್ದ ಉದ್ದದ ಸಂಭಾಷಣೆಯನ್ನು ಹೇಳುವುದರ ಮೂಲಕ ಶಾಲಾ ದಿನಗಳಲ್ಲಿ ಗೆಳೆಯರಿಂದ, ದಿನಾ ಹೋಗುತ್ತಿದ್ದ ಅಂಗಡಿ ಮಾಲೀಕರಿಂದ ಹೀರೋ ಅಂತ ಕರೆಸಿಕೊಂಡ ಮೇಲೆ ಹೀರೋ ಆಗಬೇಕೆಂಬ ಆಸೆ ಮನದಲ್ಲಿ ನೆಲೆಯೂರಿದ್ದರೂ ಆಸೆಯನ್ನು ಮನದಲ್ಲೇ ಬಚ್ಚಿಟ್ಟುಕೊಂಡಿದ್ದರು. ಶಾಲಾ ಕಾಲೇಜು ದಿನಗಳಲ್ಲಿ ಆಗಾಗ ಡಾನ್ಸ್, ನಾಟಕಗಳಲ್ಲಿ ನಟಿಸುವುದರ ಜೊತೆಗೆ ವಿದ್ಯಾಭ್ಯಾಸ ಕೂಡ ಮುಂದುವರೆಯಿತು. ತನ್ನ ಕಾಲೇಜು ದಿನಗಳಲ್ಲಿ ಪುತ್ತೂರಿನ ಗ್ಲೋರಿಯ ಕಾಲೇಜು ಆಫ್ ಫ್ಯಾಷನ್ ಡಿಸೈನಿಂಗ್ ಇದರ ವಿದ್ಯಾರ್ಥಿಗಳು ವಿನ್ಯಾಸಗೊಳಿಸಿದ ಬಟ್ಟೆಗಳ ಫ್ಯಾಶನ್ ಫೋಟೋ ಪ್ರಾಜೆಕ್ಟ್ ಗೆ ಮಾಡೆಲ್ ಆಗಿ ಕೂಡ ಪಾಲ್ಗೊಳ್ಳುತ್ತಿದ್ದರು.
ಪದವಿ ತರಬೇತಿಯ ನಂತರ ಬೆಂಗಳೂರಿನಲ್ಲಿ ದೊರೆತ ಕೆನರಾ ಬ್ಯಾಂಕ್ ನ ಐಟಿ ವಿಭಾಗದಲ್ಲಿ ಕೆಲಸದ ಜೊತೆಗೆ ಎಂ. ಬಿ. ಎ ಪದವಿ ಪಡೆದರು. ಈ ಸಂದರ್ಭದಲ್ಲಿ ಸಿನಿಮಾದ ಅವಕಾಶಕ್ಕಾಗಿ ಗಾಂಧಿ ನಗರ ಇಡೀ ಸುತ್ತಾಡಿದ್ದು ಮರೆಯದ ನೆನಪು. ಆದರೆ, ಸರಿಯಾದ ಮಾರ್ಗದರ್ಶನವಿಲ್ಲದೆ, ದುಡ್ಡು ಕೇಳುವ ಮೋಸಗಾರರಿಂದ ಸಿನಿಮಾ ನಟನಾಗಲು ದುಡ್ಡಿದ್ದರೆ ಮಾತ್ರ ಸಾಧ್ಯ, ನಮ್ಮಂತಹ ಮಧ್ಯಮ ವರ್ಗದವರಿಗಲ್ಲ ಎಂದೂ ನಿರಾಸೆ ಗೊಂಡು ಕೆಲಸದಲ್ಲೇ ಮುಂದುವರೆಯುವ ಯೋಚನೆ ಮಾಡಿದರು. ಆದರೆ, ಈ ಕಲೆ ಎಂಬುದು ಒಮ್ಮೆ ಮನಸ್ಸಿನಲ್ಲಿ ನೆಲೆಯೂರಿದರೆ ಅದು ನಾವು ಬೇಡ ಅಂದರೂ ಕೂಡ ಮತ್ತೆ ಮತ್ತೆ ನಮ್ಮನ್ನು ಅಲ್ಲಿಗೇ ಕರೆದುಕೊಂಡು ಹೋಗುತ್ತದೆ. ಇವರ ಜೀವನದಲ್ಲೂ ಅದೇ ಆಗಿದ್ದು. ನಂತರ ಇವರು ಛಲ ಬಿಡದೆ "ಸೃಷ್ಟಿ ದೃಶ್ಯ ಕಲಾ ಮಾಧ್ಯಮ"ದಲ್ಲಿ "ಶಶಿಕಾಂತ್ ಯಡಹಳ್ಳಿ(ರಂಗ ನಿರ್ದೇಶಕರು, ಮಾಧ್ಯಮ ಮಿತ್ರ)" ಇವರ ಶಿಷ್ಯನಾಗಿ ಅಭಿನಯ ತರಬೇತಿ ಜೊತೆಗೆ "ವಿನಯ ರತ್ನಸಿದ್ದಿ" ಇವರಿಂದ ನೃತ್ಯ ತರಬೇತಿ ಪಡೆದರು. ಅದೇ ವರ್ಷ ಬೆಂಗಳೂರಿನ "ಮಲ್ಲೇಶ್ವರಂ ಚೌಡಯ್ಯ ಮೆಮೋರಿಯಲ್ ಹಾಲ್"ನಲ್ಲಿ ನಡೆದ "ಬ್ಯೂಟಿ ವಿತ್ ಟ್ಯಾಲೆಂಟ್- 2014" ಮಾಡೆಲಿಂಗ್ ಇವೆಂಟ್ ನಲ್ಲಿ "ಮಿಸ್ಟರ್ ಪರ್ಫೆಕ್ಟ್" ಆಗಿ ಗುರುತಿಸಲ್ಪಟ್ಟರು. ಈ ಮಾಡೆಲಿಂಗ್ ಇವೆಂಟಿನಿಂದ ಪರಿಚಯವಾದ "ರಾಧಿಕಾ ಶರ್ಮ", "ವಿಜಯ್ ಸೂರ್ಯ ಮಲ್ಪೆ", "ಪ್ರೇಮ್ ಕುಮಾರ್" ಇವರ ಸಹಾಯದಿಂದ ನಾಯಕ ನಟನಾಗಿ ಆಯ್ಕೆಗೊಂಡರು. ಈಗ ತನ್ನ ಕನಸು ನನಸಾಯಿತೆಂದು ತಾನು ಮಾಡುತಿದ್ದ ಕೆಲಸವನ್ನು ಬಿಟ್ಟು ಸಂಪೂರ್ಣವಾಗಿ ಸಿನಿಮಾದಲ್ಲಿ ತೊಡಗಿಸಿಕೊಂಡರು. ಸಿನಿಮಾದ ನಿರ್ದೇಶಕ "ನಿವಾಸ್" ಇವರ ಸಹಾಯದಿಂದ "ಥ್ರಿಲ್ಲರ್ ಮಂಜು" ಅವರ ಶಿಷ್ಯರಾದ "ಅಶೋಕ್ ಕುಮಾರ್" ಇವರಿಂದ ಫೈಟಿಂಗ್ ತರಬೇತಿ ಪಡೆದರು. ಆದರೆ, ಈ ಖುಷಿ ಹೆಚ್ಚು ಸಮಯ ಉಳಿಯಲಿಲ್ಲ. ಕಾರಣಾಂತರಗಳಿಂದ ಈ ಚಿತ್ರ ಮುಂದುವರೆಯಲಿಲ್ಲ. ಅಲ್ಲಿಗೆ ಕೆಲಸನೂ ಇಲ್ಲ ಸಿನಿಮಾನೂ ಇಲ್ಲ ಎಂಬ ಚಿಂತೆ ಇವರನ್ನು ಕಾಡಲು ಶುರುವಾಗುತ್ತದೆ.
ಬೆಂಗಳೂರಿನಂತಹ ಊರಲ್ಲಿ ಕೆಲಸ ಇದ್ದರೇನೇ ಬದುಕು ಕಷ್ಟ, ಕೆಲಸ ಇಲ್ಲದೆ ಇವರ ಕಷ್ಟ ಯಾರ ಜೊತೆನೂ ಹೇಳಿಕೊಳ್ಳಲಾಗದಂತಿತ್ತು. ಇತ್ತ ಮನೆಯಲ್ಲಿ ಕೆಲಸ ಬಿಟ್ಟು ಸಿನಿಮಾ ನಟನಾಗಲು ಹೊರಟ ವಿಚಾರ ಗೊತ್ತಿಲ್ಲದೆ ಇರುವ ಕಾರಣ ಮನೆಯಿಂದ ಸಹಾಯ ಕೇಳುವಂತೆಯೂ ಇರಲಿಲ್ಲ. ಬಟ್ಟೆಬರೆ ಇದ್ದಿದ್ದನ್ನೇ ಹೇಗೋ ಸುಧಾರಿಸಿಕೊಂಡು ಹೋಗಬಹುದು. ಆದರೆ, ಊಟವಿಲ್ಲದೆ ಬದುಕುವುದು ಕಷ್ಟದ ಮಾತಾಗಿತ್ತು. ಇಂತಹ ಯೋಚನೆಗಳನ್ನು ಬದಿಗೊತ್ತಿ ಆಗಿದ್ದು ಆಗಲಿ ಎಂದು ನಿರ್ಧರಿಸಿ, ಸಿನಿಮಾ ಕ್ಷೇತ್ರದಿಂದ ಹಿಂತಿರುಗಲೇ ಇಲ್ಲ. ಅವಕಾಶಕ್ಕಾಗಿ ಅಲೆದಾಟ ಶುರು ಮಾಡುತ್ತಾರೆ. ಆಡಿಷನ್ ಎದುರಿಸಿವುದು ಪ್ರಾರಂಭವಾಯ್ತು. ಮನೆಯ ಬಾಡಿಗೆ, ಊಟ ತಿಂಡಿಗಾಗಿ ಪಾರ್ಟ್ ಟೈಮ್ ಕೆಲಸ ಮಾಡಿ ದಿನ ದೂಡುತ್ತಾರೆ. ಮುಂದೆ "ಸಿದ್ದಾರ್ಥ", "ಮಸ್ತ್ ಮೋಹಬ್ಬತ್", "ಮೇಲು ಕೋಟೆ ಮಂಜ", "ಉಪ್ಪಿ2", "ಐರಾವತ", "ಯಾನ", "ಗಂಧದ ಕುಡಿ" ಮುಂತಾದ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರ ಗಳಲ್ಲಿ ಕಾಣಿಸಿಕೊಂಡರು. "ಕಲಾ ಗಂಗೋತ್ರಿ" ನಾಟಕ ತಂಡವನ್ನು ಸೇರಿ, ಅದರಲ್ಲಿ "ಚಿರಸ್ಮರಣೆ" ಎಂಬ ನಾಟಕ ಪ್ರದರ್ಶನ ಇವರ ಅವಿಸ್ಮರಣೀಯ ಕ್ಷಣಗಳಲ್ಲೊಂದಾಗುತ್ತದೆ.
ಇವರ "ಸೃಷ್ಟಿ" ಅಭಿನಯ ತರಬೇತಿಯ ಗೆಳೆಯರೆಲ್ಲರೂ ಸೇರಿ "ಖದರ್ ಜಗದೀಶ್" ಅವರ ನಿರ್ದೇಶನದಲ್ಲಿ ಚಿತ್ರೀಕರಿಸಿದ "ರೂಲರ್" ಕಿರು ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದರು. "ನೀನ್ ಇಲ್ಲಯ್ ಎನ್ ಡ್ರಾಲ್ ನಾನ್ ಇಲ್ಲಯ್" ಎಂಬ ತಮಿಳು ಆಲ್ಬಮ್ ಸಾಂಗ್, ಯಾರೂ ಮಾಡಲು ಒಪ್ಪದ ಜೀವಂತ ಸಮಾಧಿಯಾಗಿ ನಟಿಸಿದ "ಭ್ರಮೆ" ಕಿರು ಚಿತ್ರ, ಹಾಗೂ "ದೃಷ್ಟಿ" ಎಂಬ ಕಿರುಚಿತ್ರ, "ಅಮ್ಮ ಮಮತೆಯ ತೊಟ್ಟಿಲು " ಎಂಬ ಆಲ್ಬಮ್ ಸಾಂಗ್ ನಲ್ಲಿ, ಉದಯ ಕಾಮಿಡಿಯಲ್ಲಿ ಪ್ರಸಾರವಾಗುತ್ತಿದ್ದ "ಪ್ರಚಂಡ ಕಿಲಾಡಿಗಳು" ಕಾರ್ಯಕ್ರಮದಲ್ಲಿ, ಹಾಗೆಯೇ ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾಗುತಿದ್ದ "ಅಣ್ಣಯ್ಯ" ಧಾರಾವಾಹಿಯಲ್ಲಿ ನಟಿಸುತ್ತಾ ಗೆಲುವಿನ ಮೆಟ್ಟಿಲೇರುತ್ತಾ ಬರುತ್ತಾರೆ.
ಆಡಿಷನ್ ಪ್ರತಿಫಲವಾಗಿ "ವಿಕ್ರಮಾದಿತ್ಯ ಭೂಷಿ" ನಿರ್ದೇಶನದ "ವೇಷಧಾರಿ " ಎಂಬ ಕನ್ನಡ ಚಲನ ಚಿತ್ರ ದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಅಭಿನಯಿಸಿದಾಗ ಇವರಿಗಾದ ಖುಷಿ ಆನಂದಭಾಷ್ಪವಾಗಿ ಹೊರಹೊಮ್ಮುತ್ತದೆ. ಈ ಚಿತ್ರ 3 ಜನವರಿ 2020ರಲ್ಲಿ ಬಿಡುಗಡೆಗೊಂಡಿತು. ಇವರು ಪಟ್ಟಿರುವ ಕಷ್ಟಕ್ಕೆ ಕಾಮನಬಿಲ್ಲು ರಂಗೇರಿ ನವಿಲು ಕುಣಿದಂಗಾಯಿತು. "ವೇಷಧಾರಿ " ಚಿತ್ರದ ಬಿಡುಗಡೆಯ ನಂತರ "ಗ್ರೂಫಿ" ಹಾಗೂ "ಸಿಂಪಲ್ಲಾಗೊಂದ್ ಜರ್ನಿ " ಎಂಬ ಎರಡು ಚಿತ್ರ ಬಿಡುಗಡೆಗೆ ಸಿದ್ಧವಾಗಿ ನಿಂತಿದೆ. ಈ ಎಲ್ಲಾ ಚಿತ್ರಗಳ ನಂತರ "ಅದಿತಿ" ಎಂಬ ಕನ್ನಡ ಚಿತ್ರ, "ಕೋನ" ಎಂಬ ತೆಲುಗು, "ತೋಳ್ ಕೊಡ್ ತೋಲಾ" ಮತ್ತು "ಮರಣ ಅಡಿ" ಎಂಬ ಎರಡು ತಮಿಳು ಚಿತ್ರಕ್ಕೆ ಆಯ್ಕೆಯಾಗುತ್ತಾರೆ. ಇವೆಲ್ಲಾ ಇವರ ಬಹುದಿನದ ಕನಸಿಗೆ ಸಂದ ಗೌರವವೆಂದು ಖುಷಿಯಾಗಿದ್ದಾರೆ.
ಇವರು ಪುತ್ತೂರಿನಲ್ಲಿ "ರಝಾಕ್" ಇವರ ನಿರ್ದೇಶನದ "ಪೆನ್ಸಿಲ್ ಬಾಕ್ಸ್" ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಿದ ಖುಷಿಯೂ ಇದೆ.
ಪುತ್ತೂರಿನ ಗೆಳೆಯರೊಂದಿಗೆ ಸೇರಿ "ಡ್ರೀಮ್ ಕ್ಯಾಚರ್ಸ್" ಎಂಬ ಸಿನಿಮಾ ನಟನಾ ತರಬೇತಿ ಕೇಂದ್ರವನ್ನು ಪ್ರಾರಂಭಿಸಿ, ಪುತ್ತೂರಿನ ಗ್ಲೋರಿಯ ಕಾಲೇಜ್ ನಲ್ಲಿ ಹಿರಿಯ, ಅನುಭವಿ ನಾಟಕ ಮತ್ತು ಚಲನಚಿತ್ರ ಕಲಾವಿದರ ಮೂಲಕ ಸಿನಿಮಾದಲ್ಲಿ ಆಸಕ್ತಿಯುಳ್ಳ ಮಕ್ಕಳಿಗೆ, ಯುವಕ, ಯುವತಿಯರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇವರಲ್ಲಿ ಮಾರ್ಗದರ್ಶನ ಪಡೆದ ವಿದ್ಯಾರ್ಥಿಗಳು ಇಂದು ಕನ್ನಡ ಹಾಗೂ ತುಳು ಭಾಷೆಯ ಕಿರು ಚಿತ್ರ, ಆಲ್ಬಮ್, ಧಾರವಾಹಿ, ಚಲನಚಿತ್ರಗಳಲ್ಲಿ ಅವಕಾಶ ಪಡೆದಿರುತ್ತಾರೆ. ಬಿಡುವಿನ ಸಮಯದಲ್ಲಿ ಇವರೇ ನಿರ್ದೇಶಿಸಿ, ನಟಿಸಿದ "ಉಡಲ್ದರಸಿ ", "ಎನ್ನ ಉಡಲ್ದ ಅಂಬಾರಿ" ಆಲ್ಬಮ್ ಈಗಾಗಲೇ ಇವರ "ಡ್ರೀಮ್ ಕ್ಯಾಚರ್ಸ್" ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿದೆ.
ಇವರ ಸಾಧನೆಯ ಹಾದಿಯನ್ನು ಗುರುತಿಸಿ "ಎಸ್. ಎಸ್. ಕೆ ಪಾಟೀಲ್ ಇಂಗ್ಲಿಷ್ ಮೀಡಿಯಂ", "ಸಿ. ಬಿ. ಎಸ್. ಸಿ. ಸ್ಕೂಲ್ ಸಂಕೇಶ್ವರ್(ಬೆಳಗಾವಿ )", "ರೋಟರಿ ಸಮುದಾಯದಳ ಬೆಳ್ಳಾರೆ ಟೌನ್", ಹಾಗೂ "ವಿಷನ್ ಸೇವಾ ಟ್ರಸ್ಟ್ ಪುತ್ತೂರು" ಸೇರಿದಂತೆ ಹಲವಾರು ಸಂಸ್ಥೆಗಳಿಂದ ಸನ್ಮಾನ ಸಂದಿದೆ.
ನೋಡುವವರು, ಮಾತಾಡುವವರು, ಅಪಹಾಸ್ಯ ಮಾಡುವವರು, ಕೀಳಾಗಿ ನೋಡುವವರು ಯಾರು ಏನೇ ಮಾಡಲಿ ಸಾಧಿಸಬೇಕು ಎಂಬ ಅಚಲ ಭಕ್ತಿ ಮತ್ತು ನಂಬಿಕೆ, ಧೈರ್ಯ ಇದ್ದರೆ, ನಾವು ಏನನ್ನು ಬೇಕಾದರೂ ಸಾಧಿಸಬಹುದು ಎಂದು ಹೇಳುವ ಇವರ ಮಾತು ಎಲ್ಲರಿಗೂ ಆದರ್ಶವಾಗಿರಬೇಕು. ಇವರ ಸಾಧನೆ ಇನ್ನೂ ಎತ್ತರಕ್ಕೆ ಬೆಳೆಯಲಿ ನಮ್ಮ ನಾಡಿಗೆ ಕೀರ್ತಿಯಾಗಲಿ ಎಂದು ಆಶಿಸೋಣ.
ನಮ್ಮ ಕಲಾವಿದರು ನಮ್ಮ ಹೆಮ್ಮೆ
#ಸಾಧಕರ_ಹಾದಿ