ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ, ಚಿನಕುರಳಿ ಹೋಬಳಿಯ ಬೇಬಿ ಗ್ರಾಮದ ಹೊರಭಾಗದಲ್ಲಿರುವ ಬೇಬಿ ಬೆಟ್ಟದಲ್ಲಿ ಸುಮಾರು 600 ವರ್ಷಗಳ ಹಿಂದೆ ಇತಿಹಾಸ ಪ್ರಸಿದ್ಧ ಶ್ರೀರಾಮಯೋಗೀಶ್ವರ ಮಠವು ಸ್ಥಾಪನೆಯಾಗಿದೆ. ಬೆಳಗಾವಿ ಜಿಲ್ಲೆಯ ಮುರುಗೋಡು ಮಹಾಂತ ಶಿವಯೋಗಿಗಳ ಮಠದಲ್ಲಿ ಇದ್ದ ಶ್ರೀ ಮರಿದೇವರು ಸ್ವಾಮಿಗಳು ಲೋಕಸಂಚಾರಕ್ಕೆಂದು ಬಂದವರು, ಕೊಳ್ಳೇಗಾಲ ತಾಲ್ಲೂಕಿನ ಶಂಭುಲಿಂಗೇಶ್ವರ ಬೆಟ್ಟಕ್ಕೆ ಬಂದು ಹತ್ತು ವರ್ಷಗಳ ಕಾಲ ನೆಲೆನಿಂತು ಅನುಷ್ಠಾನಗೊಂಡು ಬೇಬಿ ಬೆಟ್ಟಕ್ಕೆ ಬರುತ್ತಾರೆ. ಹಿಂದೆ ಶ್ರೀ ರಾಮ
ಯೋಗಿಶ್ವರರು ನೆಲೆಸಿ , ಅನೇಕ ದಿನಗಳ ಕಾಲ ಅನುಷ್ಠಾನಗೊಂಡಿದ್ದ ಈ ಕ್ಷೇತ್ರದಲ್ಲಿ ಮಠ ಸ್ಥಾಪನೆಗೊಂಡಿತ್ತು. ಇವರ ನಂತರ ಮಠಾಧೀಶರು ಯಾರೂ ಇಲ್ಲದೆ ಜೀರ್ಣಾವಸ್ಥೆಗೆ ಬಂದಿತ್ತು. ಶಂಭುಲಿಂಗೇಶ್ವರ ಬೆಟ್ಟದಿಂದ ನೇರವಾಗಿ ಇಲ್ಲಿಗೆ ಶ್ರೀ ಮರಿ ದೇವರು ಸ್ವಾಮಿಗಳು ಬಂದವರೇ ಇಲ್ಲಿನ ಗ್ರಾಮಸ್ಥರ ಕಷ್ಟ ಸುಖಗಳಿಗೆ ಸ್ಪಂದಿಸಿ ಮಠವನ್ನು ಸ್ಥಾಪನೆ ಮಾಡುತ್ತಾರೆ . ಹೀಗೆ ಸ್ಥಾಪಿತಗೊಂಡ ಮಠಕ್ಕೆ 1950 ರಲ್ಲಿ ಪಟ್ಟಾಧಿಕಾರಗೊಂಡು ಭಕ್ತರಲ್ಲಿ ಧಾರ್ಮಿಕಜಾಗೃತಿಯನ್ನು ಮೂಡಿಸಲು ಶ್ರಮಿಸಿ, ಈ ಬೆಟ್ಟದ ಮೇಲೆ ಧಾರ್ಮಿಕ ಜ್ಯೋತಿಯನ್ನು ಬೆಳಗಿಸಿದರು. ಬೆಟ್ಟದಲ್ಲಿ ಧಾರ್ಮಿಕ ಆಚರಣೆಗಳನ್ನು ಕೈಗೊಂಡ ಶ್ರೀ ಮರಿದೇವರು ಸ್ವಾಮಿಗಳು ದೀರ್ಘ ಕಾಲ ಬದುಕಿ ಈ ನೆಲದಲ್ಲಿ ಧರ್ಮ ಸಾಕಾರಗೊಳ್ಳುವಂತೆ ಮಾಡಿದ ಗುರುವರ್ಯರು. ಈ ಮಠಕ್ಕೆ ಉತ್ತರಾಧಿಕಾರಿಗಳನ್ನಾಗಿ ಶ್ರೀ ಸಿದ್ಧಗಂಗಾ ಮಠದಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದ ಶ್ರೀ ಸದಾಶಿವ ಸ್ವಾಮಿಗಳನ್ನು ನೇಮಕ ಮಾಡಿಕೊಂಡರು. ಉತ್ತರಾಧಿಕಾರಿಗಳಿಗೆ ಮಠವನ್ನು ವಹಿಸಿಕೊಟ್ಟು ದೀರ್ಘ ಅನುಷ್ಠಾನದಲ್ಲಿ ಧ್ಯಾನಾಸಕ್ತರಾದರು. ಇದಾದ ಕೆಲವೇ ವರ್ಷಗಳಲ್ಲಿ ಬೆಟ್ಟದ ಮೇಲಿನ ಮಠದಲ್ಲಿ ನೆಲೆಗೊಳ್ಳಲಾಗದೆ ತಮ್ಮ ಉತ್ತರಾಧಿಕಾರಿಗೆ ಪೂರ್ಣ ಜವಾಬ್ದಾರಿಯನ್ನು ಒಪ್ಪಿಸಿ , ಬೇಬಿ ಗ್ರಾಮದ ಹತ್ತಿರ ನೂತನ ಮಠವನ್ನು ಸ್ಥಾಪನೆ ಮಾಡಿದರು. ಹಿರಿಯ ಗುರುಗಳಿಂದ ಅಧಿಕಾರವನ್ನು ವಹಿಸಿಕೊಂಡ ಶ್ರೀ ಸದಾಶಿವಸ್ವಾಮಿಗಳು ಮಠವನ್ನು ಅಭಿವೃದ್ಧಿ ಪಡಿಸುತ್ತಾ, ಶರಣ ತತ್ವಗಳನ್ನು ಅನುಷ್ಠಾನಗೊಳಿಸುತ್ತಾ 2018 ಜುಲೈ, 4 ರಂದು ಲಿಂಗೈಕ್ಯರಾದರು. ನಂತರ 25-11-2021 ರಂದು
ಶ್ರೀ ಮಠದ ಉತ್ತರಾಧಿಕಾರಿಗಳನ್ನಾಗಿ ಶ್ರೀ ಸಿದ್ಧಗಂಗಾ ಮಠದಲ್ಲಿ ವ್ಯಾಸಂಗ ಮಾಡುತ್ತಿದ್ದ ಚಿ.ಎನ್. ಗಿರೀಶ್ ಎಂಬ ವಟುವನ್ನು ವಿರಾಕ್ತಾಶ್ರಮ ಸ್ವೀಕರಿಸಿ ಶ್ರೀ ಶಿವಬಸವ ಸ್ವಾಮಿಗಳು ಎಂದು ನಾಮಕರಣ ಮಾಡಲಾಯಿತು.
ಈಗ ಶ್ರೀ ಶಿವಬಸವ ಸ್ವಾಮಿಗಳು ಸಿದ್ಧಗಂಗೆಯ ನಡೆದಾಡುವ ದೇವರು ಶ್ರೀ ಶ್ರೀಶಿವಕುಮಾರ ಶಿವಯೋಗಿಗಳವರ ಆಶೀರ್ವಾದದಿಂದ ಹಾಗು ಸಿದ್ಧಗಂಗಾ ಮಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳವರ ದಿವ್ಯ ಅನುಗ್ರಹ ಆಶೀರ್ವಾದದಿಂದ ಶ್ರೀರಾಮಯೋಗೀಶ್ವರ ಮಠವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸುತ್ತಿದ್ದಾರೆ.