03/06/2026
ಹುಣಸೂರು ತಾಲೂಕಿನ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸದಂತೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗೆ (ಬಿಓಗೆ) ಗ್ರಾಮಸ್ಥರ ಆಗ್ರಹ.
*ಕೆಪಿಎಸ್ - ಮ್ಯಾಗ್ನೆಟ್ ಯೋಜನೆಯನ್ನು ವಿರೋಧಿಸಿ ಹಾಗೂ ಗುರುಪುರ ಮತ್ತು ಕಟ್ಟೆಮಳಲವಾಡಿ ಕೆಪಿಎಸ್ ಶಾಲೆಗಳಿಗೆ ಸುತ್ತಮುತ್ತಲಿನ ಶಾಲೆಗಳನ್ನು ವಿಲೀನಗೊಳಿಸಿದಂತೆ ಆಗ್ರಹಿಸಿ, ಹುಣಸೂರು ತಾಲೂಕಿನ ವಿವಿಧ ಗ್ರಾಮಗಳ ಗ್ರಾಮಸ್ಥರು ಎಐಡಿಎಸ್ಓ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ನೇತೃತ್ವದಲ್ಲಿ ಹುಣಸೂರು ತಾಲೂಕು ಬಿಇಓ ಕಚೇರಿ ಮುಂಭಾಗ ಪ್ರತಿಭಟನೆ ಮಾಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ (BEO) ಮನವಿ ಪತ್ರ ಸಲ್ಲಿಸಿದರು*.
*ಈ ಸಂದರ್ಭದಲ್ಲಿ ಎಐಡಿಎಸ್ಓ ಜಿಲ್ಲಾ ಉಪಾಧ್ಯಕ್ಷರಾದ ಸ್ವಾತಿ* ಅವರು ಮಾತನಾಡಿ ' ಸರ್ಕಾರ ತನ್ನ ಮೂಲ ಕರ್ತವ್ಯ ಮರೆತು ಜನಸಾಮಾನ್ಯರನ್ನು ಕತ್ತಲೆಗೆ ತಳ್ಳುವ ಹೀನ ಕೆಲಸಕ್ಕೆ ಕೈಹಾಕಿದೆ. ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ಇಷ್ಟೊಂದು ದಾಖಲಾತಿ ಮಾಡಿಸಿದ್ದೇವೆ ಎಂದು ಅಂಕಿ-ಅಂಶಗಳನ್ನು ಪ್ರದರ್ಶಿಸಿ ಜಾರಿಕೊಳ್ಳಲು ಶಿಕ್ಷಕರು ಮತ್ತು ಪೋಷಕರ ಮೇಲೆ ಒತ್ತಡ ಹೇರುತ್ತಿದೆ' ಎಂದು ದೂರಿದರು. ಸರ್ಕಾರಿ ಶಾಲೆಗಳು ಮಕ್ಕಳ ಜ್ಞಾನದ ಮಂದಿರವಾಗಿದೆ. ಹುಣಸೂರಿನಲ್ಲಿ ಗುರುಪುರ ಹಾಗೂ ಕಟ್ಟೆಮಳಲವಾಡಿ ಶಾಲೆಯನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆ ಮಾಡುವುದಾಗಿ ಡಿಡಿಪಿಐ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಈ ಸುತ್ತಲಿನ ಶಾಲೆಗಳನ್ನು ಮುಚ್ಚಬಾರದೆಂದು ಆಗ್ರಹಿಸಿದರು.
ಈಗಾಗಲೇ ಟಿ .ನರಸೀಪುರ ತಾಲೂಕಿನ ಯಡದೊರೆ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ಸುತ್ತಲಿನ ಹಳ್ಳಿಗಳ ಶಾಲೆಯ ಮಕ್ಕಳನ್ನು ಸೇರಿಸಲು ಶಿಕ್ಷಕರು ಗ್ರಾಮಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ.ಕಳೆದ ವರ್ಷ ಪೈಲೆಟ್ ಪ್ರಾಜೆಕ್ಟ್ ಕೆಪಿಎಸ್ ಮ್ಯಾಗ್ನೆಟ್ ಹೊಂಗನೂರಿಗೆ ಸುತ್ತಮುತ್ತಲಿನ 7 ಹಳ್ಳಿಗಳ ಶಾಲೆಗಳನ್ನು ಶೈಕ್ಷಣಿಕ ವರ್ಷದ ಮಧ್ಯದಲ್ಲಿ ವಿಲೀನಗೊಳಿಸಲು ಆದೇಶಿಸಿತ್ತು. ಹಾಗೆಯೇ, ಈಗ ಅರಸೀಕೆರೆ ತಾಲೂಕಿನಲ್ಲಿ 5 ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಆರಂಭಿಸಿ, ಸುತ್ತಮುತ್ತಲಿನ 50ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಲು ಸರ್ಕಾರ ವಾರದ ಹಿಂದೆಯೇ ಆದೇಶ ಹೊರಡಿಸಿದೆ. ಈ ಬೆಳವಣಿಗೆಗಳು ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಜಾರಿಗೆ ಸಾಕ್ಷಿಯಾಗಿದ್ದು,
ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳಿಗೆ ಹಿಂಬಾಗಿಲಿಂದ ಶಾಲೆಗಳನ್ನು ಮುಚ್ಚುವ ಕುತಂತ್ರ ಮಾಡಬಹುದು. ಹಾಗಾಗಿ ಪೋಷಕರು ಗ್ರಾಮಸ್ಥರು ಎಚ್ಚರಿಕೆಯಿಂದ ತಮ್ಮ ಊರಿನ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಗುಣಮಟ್ಟದ ಶಿಕ್ಷಣವನ್ನು ಕೆಪಿಎಸ್ ಶಾಲೆಯಲ್ಲಿ ಕೊಡುತ್ತೇವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಈಗಾಗಲೇ ಇರುವ ಹಲವಾರು ಕೆಪಿಎಸ್ ಶಾಲೆಗಳು ಮೂಲಭೂತ ಸೌಲಭ್ಯಗಳಿಲ್ಲದೆ ಸೊರಗುತ್ತಿವೆ . ಹಾಗಾಗಿ ಈಗಿರುವ ಹಳ್ಳಿಗಳ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಬಲಪಡಿಸಿ ಎಂದು ಆಗ್ರಹಿಸಿದರು.
*ಕರ್ನಾಟಕ ರಾಜ್ಯ ರೈತ ಸಂಘದ ಮೈಸೂರು ಜಿಲ್ಲಾಧ್ಯಕ್ಷರಾದ* ಹೊಸೂರು ಕುಮಾರ್ ಅವರು ಮಾತನಾಡಿ, ಗ್ರಾಮೀಣ ಭಾಗದ ಶಾಲೆಗಳನ್ನು ರಕ್ಷಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹಿಂಪಡೆಯುವವರೆಗೆ ನಮ್ಮ ಹೋರಾಟ ನಿಲ್ಲಬಾರದು. ಸರ್ಕಾರ ಎಚ್ಚೆತ್ತುಕೊಂಡು ಈ ಕೂಡಲೇ ನೀತಿಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ದೊಡ್ಡ ಹೋರಾಟವನ್ನು ಸರ್ಕಾರ ಎದುರಿಸಬೇಕಾಗುತ್ತದೆ ಎಂದರು.
*ದಲಿತ ಸಂಘರ್ಷ ಸಮಿತಿ ಮುಖಂಡರಾದ ರಾಜಣ್ಣ* ಅವರು ಮಾತನಾಡಿ, ಹಲವಾರು ಸರ್ಕಾರಿ ಅಧಿಕಾರಿಗಳು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದುಕೊಂಡಿದ್ದಾರೆ. ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಬಲಪಡಿಸಬೇಕು. ಈಗಾಗಲೇ ವಿದ್ಯುತ್, ಬಂದರು, ರೈಲ್ವೆ ಹಾಗೂ ನೀರನ್ನು ಖಾಸಗಿ ಅವರಿಗೆ ಮಾರಿದ್ದೀರಿ. ಇವಾಗ ಸರ್ಕಾರಿ ಶಾಲೆಗಳನ್ನು ಕೂಡ ಖಾಸಗಿ ಅವರಿಗೆ ಮಾರಲು ನಿಂತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನಂತರ ಹುಣಸೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕಾಳಸ್ವಾಮಿ ಅವರಿಗೆ ಮನವಿ ಪತ್ರ ನೀಡಲಾಯಿತು.ಮನವಿ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಸುನಿಲ್, ಕರ್ನಾಟಕ ರಾಜ್ಯ ರೈತ ಸಂಘಟನೆಯ ಸದಸ್ಯರು ಹಾಗೂ ಕೊಡಗು ಹೊಸೂರು ಕಾಲೋನಿಯ ಮಂಜೇಗೌಡರು, ರಾಜೇಗೌಡರು, ಉಮ್ಮತ್ತೂರಿನ ರವಿ, ಭಾಸ್ಕರ್. ಅಂಬೇಡ್ಕರ್ ನಗರದ ಜೀವನ್, ಕಿರಿಜಾಜಿಯ ಧನಂಜಯ್ ,ಮಹದೇವ್, ಅಗ್ರಹಾರ ರಾಮೇಗೌಡ, ಹರೀಶ್ ಹಾಗೂ ಕಟ್ಟೆಮಳಲವಾಡಿ ಕೊಪ್ಪಲಿನ ದೇವರಾಜು ಉಜಿನಿಗೌಡ ಒಳಗೊಂಡಂತೆ ವಿವಿಧ ಗ್ರಾಮಗಳಿಂದ 50ಕ್ಕೂ ಹೆಚ್ಚು ಪೋಷಕರು, ಗ್ರಾಮಸ್ಥರು ನೆರೆದಿದ್ದರು.