07/02/2026
ಸರ್ಕಾರಿ ಶಾಲೆ ಇಲ್ಲದ ಊರನ್ನು ಸೃಷ್ಟಿಸುವುದು ಯುದ್ಧವನ್ನು ಮೀರಿದ ಕ್ರೌರ್ಯ!
ಸರ್ಕಾರಿ ಶಾಲೆ ಉಳಿಸಲು ಚಿಂತಕರ ಅಭಿಮತ
ಕೆಪಿಎಸ್ ಮ್ಯಾಗ್ನೆಟ್ ಹೆಸರಲ್ಲಿ ಸರ್ಕಾರಿ ಶಾಲೆ ಮುಚ್ಚುವುದರ ವಿರುದ್ಧ ನಡೆದ ರಾಜ್ಯಮಟ್ಟದ ವಿದ್ಯಾರ್ಥಿ-ಪೋಷಕರ ಸಮಾವೇಶದಲ್ಲಿ ನಾಡಿನ ಅನೇಕ ಚಿಂತಕರು ಮಾತನಾಡಿ ಸರ್ಕಾರಿ ಶಾಲೆ ಇಲ್ಲದ ಊರನ್ನು ಸೃಷ್ಟಿಸುವುದು ಯುದ್ಧಕ್ಕಿಂತ ಕ್ರೂರವಾದದ್ದು ಎಂಬ ಅಭಿಮತ ವ್ಯಕ್ತಪಡಿಸಿದರು.
40,000 ಸರ್ಕಾರಿ ಶಾಲೆಗಳನ್ನು ಕೊಲ್ಲುವ ಕೆ.ಪಿ.ಎಸ್ ಮ್ಯಾಗ್ನೆಟ್ ಯೋಜನೆಯನ್ನು ರದ್ದುಗೊಳಿಸಿ, 'ನಮ್ಮೂರ ಶಾಲೆ' ಉಳಿಸಲು ಎಐಡಿಎಸ್ಓ ಮತ್ತು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಗಳ ನೇತೃತ್ವದಲ್ಲಿ ರಾಜ್ಯ ಮಟ್ಟದ ವಿದ್ಯಾರ್ಥಿ ಮತ್ತು ಪೋಷಕರ ಸಮಾವೇಶವನ್ನು ಇಂದು ನಗರದ ಗಾಂಧಿ ಭವನದ ಮೈಲಾರ ಮಹದೇವಪ್ಪ ಸಭಾಂಗಣದಲ್ಲಿ ಸಂಘಟಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿಕ್ಷಣ ತಜ್ಞರಾದ ಪ್ರೊ. ನಿರಂಜನಾರಧ್ಯ ಮಾತನಾಡಿ, ಕೇಂದ್ರ ಬಿ.ಜೆ.ಪಿ ಸರ್ಕಾರ ಜಾರಿಗೊಳಿಸಿದ ಎನ್.ಇ.ಪಿ 2020 ಯನ್ನೇ ಕೆ. ಪಿ. ಎಸ್, ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ಪ್ರಸ್ತುತ ರಾಜ್ಯ ಸರ್ಕಾರವು ಅನುಷ್ಠಾನಗೊಳಿಸಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಬಿಜೆಪಿ ಸರ್ಕಾರವು 13,800 ಶಾಲೆಗಳನ್ನು ಮುಚ್ಚಲು ಹೊರಟಾಗ ವಿರೋಧಿಸಿದ್ದ ಕಾಂಗ್ರೆಸ್ ಸರ್ಕಾರವೇ ಈಗ 23,000 ಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಲು ಹೊರಟಿದೆ. ಸಚಿವರು ಸದನದಲ್ಲಿ ಕುಳಿತೇ ಸುಳ್ಳು ಹೇಳುತ್ತಿರುವುದನ್ನು ನಾವು ಹಿಂದೆ ಎಂದೂ ಕಂಡಿರಲಿಲ್ಲ. ಒಂದೇ ಒಂದು ಶಾಲೆ ಮುಚ್ಚುವುದಿಲ್ಲ ಎಂದು ಹೇಳಿ, ಅದೇ ದಿನ ಚನ್ನಪಟ್ಟಣದ 7 ಶಾಲೆಗಳನ್ನು ಮುಚ್ಚುವ ಆದೇಶ ಹೊರಡಿಸಿದರು. ಹಿಂಬಾಗಿಲಿನಿಂದ ಹೊಸ ಶಿಕ್ಷಣ ನೀತಿ 2020ನ್ನು ಚಾಚೂ ತಪ್ಪದೇ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸುತ್ತಿದೆ ಎಂದು ಹೇಳಿದರು.
ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಸಬಿಹಾ ಭೂಮಿ ಗೌಡ ಮಾತನಾಡಿ, ಶಿಕ್ಷಣವು ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆ ನೀಡಿ ಮೌಢ್ಯ ಹಾಗೂ ದಾಸ್ಯದಿಂದ ಹೊರ ತರುತ್ತದೆ. ಅಂತಹ ಶಿಕ್ಷಣವನ್ನು ಕೆ. ಪಿ. ಎಸ್ ಮ್ಯಾಗ್ನೆಟ್ ಯೋಜನೆ ಮೂಲಕ ತಳ ಸಮುದಾಯದಕ್ಕೆ ದಕ್ಕದ ಹಾಗೆ ಮಾಡುತ್ತಿರುವ ಹುನ್ನಾರದ ವಿರುದ್ಧ ನಾವು ಹೋರಾಡಬೇಕು ಎಂದರು.
ಕಲಬುರ್ಗಿಯ ಕೇಂದ್ರೀಯ ವಿಶ್ವ ವಿದ್ಯಾಲಯದ ಸಹಾಯಕ ಪ್ರಾಧ್ಯಪಕರಾದ ಕಿರಣ್ ಗಾಜನೂರು ಮಾತನಾಡಿ, ಶಾಲೆಗಳೇ ಇಲ್ಲದ ಊರನ್ನು ಸೃಷ್ಟಿಸುವುದು ಯುದ್ಧಕ್ಕಿಂತ ಕ್ರೂರವಾದದ್ದು. ಸರ್ಕಾರಿ ಶಾಲೆಗಳೇ ಇಲ್ಲದೇ ಇರುವ ಊರನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರ ಇಂತಹ ಕ್ರೌರ್ಯವನ್ನು ಎಸಗುತ್ತಿದೆ. ಸರ್ಕಾರಿ ಶಾಲೆಗಳು ಆಧುನಿಕ ಚಿಂತನೆಗಳ ದ್ವಾರಗಳು. ಸರ್ಕಾರಿ ಶಾಲೆಗಳು ಉಳಿದರೆ ಮಾತ್ರ ಪ್ರಜಾಪ್ರಭುತ್ವದ ಉಳಿವು. ಶಿಕ್ಷಣ, ಸಂಸ್ಕೃತಿ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಸರ್ಕಾರಿ ಶಾಲೆ ಉಳಿಸುವ ಚಾರಿತ್ರಿಕ ಹೋರಾಟವು ಮುಂದುವರೆಯಬೇಕು ಎಂದು ಕರೆ ನೀಡಿದರು.
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಗುರುಪ್ರಸಾದ್ ಕೆರೆಗೋಡು ಮಾತನಾಡಿ, ಕೆ. ಪಿ. ಎಸ್ ಮ್ಯಾಗ್ನೆಟ್ ಯೋಜನೆಯು, ಹಳ್ಳಿಗಳಲ್ಲಿ, ಹಟ್ಟಿಗಳಲ್ಲಿ, ಜೀವಿಸುತ್ತಿರುವ ಎಲ್ಲಾ ಸಮುದಾಯದ ಶಿಕ್ಷಣವನ್ನು
ಕಿತ್ತುಕೊಳ್ಳುತ್ತಿದೆ. ಖಾಸಗೀ ಲಾಭಿಗಳಿಗೆ ಒಳಗಾಗಿ ಸರ್ಕಾರ ಶಾಲೆ ಮುಚ್ಚುತ್ತಿರುವುದರ ವಿರುದ್ಧ ಒಗ್ಗಟ್ಟಿನ ಹೋರಾಟ ಕಟ್ಟುವ ಅವಶ್ಯಕತೆ ಇದೆ ಎಂದು ತಿಳಿಸಿದರು.
ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ರಾಜ್ಯ ಉಪಾಧ್ಯಕ್ಷರಾದ ವಿ. ಎನ್. ರಾಜಶೇಖರ್ ಮಾತನಾಡಿ, "ಪ್ರತಿಯೊಂದು ಪಕ್ಷ, ಸರ್ಕಾರವು ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರಕ್ಕೆ ಕೈ ಜೋಡಿಸಿದೆ. ಸದನದಲ್ಲಿ ಕೂತು 'ಸರ್ಕಾರಿ ಶಾಲೆಗಳನ್ನು ಹೇಗೆ ಮುಚ್ಚೋದು?' ಎಂದು ಚರ್ಚಿಸುತ್ತಿರುವುದು ಅತ್ಯಂತ ದುರಂತದ. KPS ಮ್ಯಾಗ್ನೆಟ್ ಶಾಲೆಗಳಿಗೆ ADB (ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್) ನಂತಹ ದೊಡ್ಡ ಬ್ಯಾಂಕಿನಿಂದ 2 ಸಾವಿರ ಕೋಟಿ ರೂ. ಸಾಲ ಪಡೆದಿದೆ. ಊರಾಚೆ ಇರುವ ಮ್ಯಾಗ್ನೆಟ್ ಶಾಲೆಗಳಿಗೆ ಉಚಿತ ಬಸ್ ಎನ್ನುವುದು ಕೇವಲ ಕಾಗದದ ಮೇಲಿನ ಭರವಸೆ, ಅದರ ಸಂಪೂರ್ಣ ಜವಾಬ್ದಾರಿಯನ್ನು SDMC ಮತ್ತು ಪೋಷಕರ ತಲೆಗೆ ಕಟ್ಟಿ ಸರ್ಕಾರ ಕೈತೊಳೆದುಕೊಳ್ಳುತ್ತಿದೆ. ರಾಜ್ಯ ಸರ್ಕಾರವು KPS ಮ್ಯಾಗ್ನೆಟ್ ಯೋಜನೆಯನ್ನು ತಂದಿರುವುದೇ, ಸಾರ್ವಜನಿಕ ಶಿಕ್ಷಣವನ್ನು ಸಂಪೂರ್ಣ ಖಾಸಗೀಕರಿಸುವುದಕ್ಕಾಗಿ ಮತ್ತು ಬಡ ಮಕ್ಕಳಿಂದ ಶಾಶ್ವತವಾಗಿ ಶಿಕ್ಷಣವನ್ನು ಕಸಿಯುವುದಕ್ಕಾಗಿ!" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ಸಾಹಿತಿಗಳಾದ ಪ್ರೊ ಎಸ್. ಜಿ. ಸಿದ್ದರಾಮಯ್ಯ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ದಾಖಲಾತಿ ಕುಸಿಯುವುದನ್ನು ನೋಡಿದರೆ, 100 ವರ್ಷಗಳ ಹಿಂದೆ ಹೋಗುವ ದುಸ್ಥಿತಿ ಎದುರಾಗುತ್ತಿದೆ. ಈಗಾಗಲೇ ವಾಸ್ತವದಲ್ಲಿ ಹಳ್ಳಿಗಳಲ್ಲಿನ ಹೆಣ್ಣು ಮಕ್ಕಳು 5 ಕಿ.ಮೀ. ಆಚೆ ಇರುವ ಶಾಲೆಗಳಿಗೆ ತೆರಳಲಾಗದೆ, ಶಿಕ್ಷಣದಿಂದ ದೂರ ಹೋಗುತ್ತಿದ್ದಾರೆ. ಶಾಲೆ ಮುಚ್ಚುವುದು ಅಮಾನವೀಯ ಮತ್ತು ಅನಾಗರೀಕವಾದ ನಡೆ. ಸರ್ಕಾರವು ಜನರಿಗೆ ಸುಳ್ಳು ಹೇಳಿ ಮೋಸ ಮಾಡುತ್ತಿದೆ. ಈ ನೀತಿಯ ವಿರುದ್ಧದ ಹೋರಾಟಕ್ಕೆ ಎಲ್ಲರೂ ಧ್ವನಿಯಾಗೋಣ ಎಂದು ಅಭಿಮತ ವ್ಯಕ್ತಪಡಿಸಿದರು.
ಮುಖ್ಯ ಭಾಷಣಕಾರರಾಗಿ ಎಐಡಿಎಸ್ಓ ಕೇಂದ್ರ ಕೌನ್ಸಿಲ್ ಜಂಟಿ ಕಾರ್ಯದರ್ಶಿ ಅಲೀನಾ ಮಾತನಾಡಿ, ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ, ವರ್ಷದಿಂದ ವರ್ಷಕ್ಕೆ ಶಿಕ್ಷಣಕ್ಕೆ ನೀಡುತ್ತಿರುವ ಅನುದಾನ ಕಡಿತಗೊಳಿಸುತ್ತಿದೆ. ಶಿಕ್ಷಣದ ಬಜೆಟ್ ಕೇವಲ ಶೇ.2.8ರಷ್ಟಿದೆ. ತತ್ಪರಿಣಾಮ, ಸರ್ಕಾರಿ ಶಾಲೆ - ಕಾಲೇಜು ಹಾಗೂ ವಿಶ್ವ ವಿದ್ಯಾನಿಲಯಗಳು ಅನುದಾನ ಕೊರತೆಯಿಂದ ನರಳುತ್ತಿವೆ. ಸರ್ಕಾರಗಳು ಪ್ರಜಾತಾಂತ್ರಿಕ- ಧರ್ಮನಿರಪೇಕ್ಷ- ವೈಜ್ಞಾನಿಕ ಶಿಕ್ಷಣವನ್ನು ನೀಡುವ ಬದಲು, ವಿದ್ಯಾರ್ಥಿಗಳನ್ನು ಕಾರ್ಖಾನೆಗಳಲ್ಲಿ ಅಗ್ಗದ ಕಾರ್ಮಿಕರನ್ನಾಗಿಸಲು ಹೊರಟಿರುವುದು ದುರಂತ ಎಂದರು.
ಭಾಷಣಕಾರರಾಗಿ, ಎಐಡಿಎಸ್ಓ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಮಾತನಾಡಿ, ನಮ್ಮ ದೇಶದಲ್ಲಿ ಕಳೆದ 5 ವರ್ಷಗಳಲ್ಲಿ 84,000 ಶಾಲೆಗಳು ಬಿಸಿಯೂಟದಿಂದ ಆಚೆ ಬಂದಿದೆ. ಈ ಅಂಕಿ ಅಂಶವು ದೇಶದಲ್ಲಿ ಶಾಲೆಗಳು ಮುಚ್ಚಿರುವುದನ್ನು ಬಯಲುಗೊಳಿಸುತ್ತದೆ. ದೇಶದ ಎಲ್ಲಾ ರಾಜ್ಯಗಳಲ್ಲಿ ಶಾಲೆ ಮುಚ್ಚುವ ಕೆಲಸವನ್ನು ಎಲ್ಲ ಪಕ್ಷಗಳೂ ವ್ಯವಸ್ಥಿತವಾಗಿ ಮಾಡುತ್ತಿದೆ. ಸರ್ಕಾರಗಳು ರಚಿಸುವ ಈ ನೀತಿಗಳ ಹಿಂದಿರುವುದು ಈ ದೇಶದ ಬಂಡವಾಳಶಾಹಿಗಳು. ಬಡ ಕಾರ್ಮಿಕರು ,ರೈತರ ಮಕ್ಕಳಿಂದ ಶಿಕ್ಷಣ ಕಸಿಯುವ ಹುನ್ನಾರ ಇದಾಗಿದ್ದು, ಸಾರ್ವಜನಿಕ ಶಿಕ್ಷಣ ಉಳಿಸಿದರೆ ಮಾತ್ರ ಮಾನವ ನಾಗರೀಕತೆ ಉಳಿಯಲು ಸಾಧ್ಯ ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆ ಉಳಿಸಲು ಬಲಿಷ್ಠ ಹೋರಾಟ ಬೆಳೆಸಬೇಕೆಂದು ಕರೆ ನೀಡಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಅಧ್ಯಕ್ಷರು, ಸದಸ್ಯರು ಸಮಾವೇಶದಲ್ಲಿ ಮಾತನಾಡಿದರು. ಸಮಾವೇಶದ ಅಧ್ಯಕ್ಷತೆಯನ್ನು ಎಐಡಿಎಸ್ಓ ರಾಜ್ಯ ಅಧ್ಯಕ್ಷರಾದ ಅಶ್ವಿನಿ ಕೆ. ಎಸ್ ಅವರು ವಹಿಸಿದ್ದರು.
ಸಮಾವೇಶದಲ್ಲಿ ಎಐಡಿಎಸ್ಓ ರಾಜ್ಯ ಉಪಾಧ್ಯಕ್ಷರುಗಳಾದ ಹಣಮಂತ, ಅಭಯ, ಚಂದ್ರಕಲಾ, ಅಪೂರ್ವ ಸಿ. ಎಂ, ರಾಜ್ಯ ಖಜಾಂಚಿಗಳಾದ ಸುಭಾಷ್ ಬಿ. ಜೆ, ಕಚೇರಿ ಕಾರ್ಯದರ್ಶಿ ಮಹಾಂತೇಶ್ ಬಿಳೂರ್ ಸೇರಿದಂತೆ ರಾಜ್ಯದ ನೂರಾರು ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.