09/09/2023
ಭಾರತವೆಂದರೆ ಭಾರತೀಯರೇ ಮೂಗು ಮುರಿಯುತ್ತಿದ್ದ ಕಾಲ ಈಗ ಬದಲಾಗಿದ್ದು, ಜಗತ್ತೇ "ಭಾರತ್ ಮಾತಾ ಕೀ ಜೈ" ಎಂಬ ಸಂದರ್ಭ ಬಂದಿದೆ.
ಇಷ್ಟು ವರ್ಷಗಳ ಕಾಲ ಜಿ-20 ಶೃಂಗಸಭೆಗೆ ಕೇವಲ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದ ಭಾರತ, ಇಂದು ಅದೇ ಜಿ-20 ರಾಷ್ಟ್ರಗಳ ಅಧ್ಯಕ್ಷನಾಗಿ, ಶೃಂಗಸಭೆಯ ಆತಿಥ್ಯವನ್ನು ವಹಿಸಿಕೊಳ್ಳುವಷ್ಟು ಸಮರ್ಥವಾಗಿದೆ.
ಜಿ-20 ಸಭೆಯಿಂದ ಭಾರತೀಯರ ಹೊಟ್ಟೆ ತುಂಬುತ್ತದೆಯಾ ಎಂದು ಪ್ರಶ್ನೆ ಮಾಡುವ ಬಹಳಷ್ಟು ವಂಧಿಮಾಗದರು ನಮ್ಮ ನಡುವೆಯೇ ಇದ್ದಾರೆ. ಆದರೆ ಜಗತ್ತು ಮುಂದಿನ 20 ವರ್ಷ ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಭಾರತದ ಮೇಲೆ ಅವಲಂಬಿತವಾಗಿದೆ ಎಂಬುದು ವರ್ತಮಾನದ ವಾಸ್ತವ.
ಅಷ್ಟಕ್ಕೂ ಜಿ-20 ರಾಷ್ಟ್ರಗಳ ಶೃಂಗಸಭೆ ಎಂಬುದು ಸಾಮಾನ್ಯ ಸಭೆಯಲ್ಲ. ಜಿ -20 ರಾಷ್ಟ್ರಗಳು ಜಾಗತಿಕ ಜಿಡಿಪಿಯಲ್ಲಿ ಒಟ್ಟು 85% ಪಾಲನ್ನು ಹೊಂದಿದ್ದು, ಜಗತ್ತಿನ ಮೂರನೇ ಎರಡರಷ್ಟು (2/3) ಜನಸಂಖ್ಯೆ ಹೊಂದಿವೆ.
ಜಗತ್ತಿನ ಬಲಿಷ್ಠ ರಾಷ್ಟ್ರಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿರುವಾಗ ಅವರೆಲ್ಲರೂ ಈಗ ಭರವಸೆ ಇಟ್ಟಿರುವುದು ಭಾರತದ ಮುಂದಾಳತ್ವದಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯ ಮೇಲೆ. ಜಗತ್ತಿನ ಪಾಲಿಗೆ ಜಿ-20 ಸಂಕಷ್ಟಹರ ವಿನಾಯಕ.
ಜಗತ್ತು ಕೋವಿಡ್-19 ಮಹಾಮಾರಿ ಸಂಕಷ್ಟದಿಂದ ಚೇತರಿಸಿಕೊಳ್ಳುತ್ತಿದೆ. ಕೋವಿಡ್-19 ನಿಂದ ಜಗತ್ತಿನ ಹಲವು ರಾಷ್ಟ್ರಗಳ ಆರ್ಥಿಕತೆ ಕುಸಿದಿದೆ. ಉಕ್ರೇನ್ -ರಷ್ಯಾ ಯುದ್ಧದ ಪರಿಣಾಮ ಪಾಶ್ಚಾತ್ಯ ದೇಶಗಳಲ್ಲಿ ಹಣದುಬ್ಬರ ವಿಪರೀತ ಏರಿದೆ. ಈ ಎಲ್ಲಾ ಸಂಕಷ್ಟಗಳಿಗೆ ಪರಿಹಾರ ನೀಡುವ ಜವಾಬ್ದಾರಿ ಜಿ-20ಯದ್ದಾಗಿದೆ.
ಮತ್ತೊಬ್ಬರ ಸಂಕಷ್ಟಗಳಿಗೆ ಸದಾ ಸ್ಪಂದಿಸುವ ಸಹನಶೀಲ ದೇಶ ನಮ್ಮ ಭಾರತ. ಜಿ-20 ರಾಷ್ಟ್ರಗಳ ಅಧ್ಯಕ್ಷ ಸ್ಥಾನ ಅಲಂಕರಿಸಿರುವ ಭಾರತ ವಿಶ್ವಗುರುವಾಗಿ ಹೊರಹೊಮ್ಮಲು ಇದು ಮೊದಲ ಮೆಟ್ಟಿಲಾಗಿದೆ. ಜಿ-20 ಶೃಂಗಸಭೆಯ ಭಾರತದ ಆತಿಥ್ಯ ಹಾಗೂ ಆಯೋಜನೆ ಬಗ್ಗೆ ವಿಶ್ವದ ಶ್ರೇಷ್ಠ ನಾಯಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
“ಭಾರತದ ಸಾಮರ್ಥ್ಯವನ್ನು ಜಗತ್ತಿನೆದುರು ತೆರೆದಿಡಲು ಜಿ-20 ಅವಕಾಶ ಮಾಡಿಕೊಟ್ಟಿದೆ. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಜಗತ್ತಿನ 5ನೇ ಅತಿದೊಡ್ಡ ಅರ್ಥಶಕ್ತಿಯಾಗಿದ್ದು ಜಾಗತಿಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದೆ. ಶ್ರೀ ನರೇಂದ್ರ ಮೋದಿಯವರು ದೇಶದ ಒಳಗೆ ಮಾತ್ರವಲ್ಲ, ಹೊರಗೂ ಓರ್ವ ಕ್ರಾಂತಿಕಾರಿ ನಾಯಕ” ಎಂದು ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಟೋನಿ ಅಬ್ಬೋಟ್ ಹೇಳಿದ್ದಾರೆ.
“ವಸುಧೈವ ಕುಟುಂಬಕಂ ಎಂಬುದನ್ನು ಭಾರತ ಜಿ-20 ಶೃಂಗಸಭೆಯ ಮೂಲಮಂತ್ರವಾಗಿಸಿದೆ. ಇದಕ್ಕಿಂತ ಉತ್ತಮವಾದ ಸಂದೇಶ ಮತ್ತೊಂದಿಲ್ಲ. ಭಾರತವು ಸರ್ವರನ್ನೂ ಜತೆಗೇ ಕರೆದೊಯ್ಯುವ ಮುಂದಾಳತ್ವ ವಹಿಸಿರುವುದು ನನಗೆ ಸಂತಸ ತಂದಿದೆ" ಎಂದು ಮಾರಿಷಸ್ನ ಪ್ರಧಾನಿ ಪ್ರವಿಂದ್ ಜುಗ್ನಾಥ್ ಹೇಳಿದ್ದಾರೆ.
ಉಕ್ರೇನ್ -ರಷ್ಯಾ ಯುದ್ಧದಿಂದ ಚೀನಾ ಮತ್ತು ಅಮೆರಿಕ ದೇಶಗಳು ಪರಸ್ಪರ ಮುಖಕ್ಕೆ ಮುಖ ಕೊಟ್ಟು ಮಾತನಾಡದಂತಹ ಸಂದರ್ಭದಲ್ಲಿ, ಆ ಎರಡು ರಾಷ್ಟ್ರಗಳು ಶಾಂತಿಯಿಂದ ಕೂತು ಮಾತನಾಡಲು ಜಗತ್ತಿನಲ್ಲಿ ಇರುವ ಏಕೈಕ ದೇಶವೆಂದರೆ ಅದು ನಮ್ಮ ಭಾರತ.
ಜಿ-20 ಯನ್ನು ಮುನ್ನಡೆಸುವ ಜೊತೆಗೆ ಜಾಗತಿಕ ಸಮಸ್ಯೆಗಳಿಗೆ ಭಾರತ ಪರಿಹಾರ ಕಂಡುಹಿಡಿಯುತ್ತಿದೆ. ಇದರಿಂದ ಭಾರತದ ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ಬಹುದೊಡ್ಡ ಉತ್ತೇಜನ ಜಾಗತಿಕ ಮಟ್ಟದಲ್ಲಿ ದೊರೆಯಲಿದೆ.
ಒಂದು ವರ್ಷದವರೆಗೆ ಭಾರತ, ಹಣಕಾಸು, ಹವಾಮಾನ ಹಾಗೂ ವಿಶ್ವ ಬ್ಯಾಂಕ್ನ ಸುಧಾರಣೆ ಮತ್ತು ಇತ್ಯಾದಿ ಕೆಲಸಗಳಲ್ಲಿ ಎಲ್ಲಾ ಸದಸ್ಯ ದೇಶಗಳನ್ನು ಒಗ್ಗೂಡಿಸಿಕೊಂಡು ಕೆಲಸ ಮಾಡುವುದು, ಭಾರತದ ಸರ್ವತೋಮುಖ ಬೆಳವಣಿಗೆಗೆ ನೆರವಾಗಲಿದೆ.
ಬದುಕನ್ನು ಮತ್ತಷ್ಟು ಸುಲಭವಾಗಿಸುವ ತಂತ್ರಜ್ಞಾನ, ಜಗತ್ತಿನ ಹಸಿವನ್ನು ನೀಗಿಸುವ ಸುಧಾರಿತ ಕೃಷಿ, ಎಲ್ಲರಿಗೂ ತಲುಪುವಂತಹ ಉತ್ಕೃಷ್ಟ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವ ಭಾರತದ ಕನಸು ಸಾಕಾರವಾಗಲಿದೆ.
ಭಾರತವನ್ನು $ 5 ಟ್ರಿಲಿಯನ್ ಆರ್ಥಿಕತೆಯ ದೇಶವನ್ನಾಗಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಗುರಿಗೆ ಜಿ-20 ಶೃಂಗಸಭೆ ಮತ್ತಷ್ಟು ಇಂಬು ನೀಡಲಿದೆ.