24/12/2020
Muroora muttugalu - 1
ಮೂರೂರು ದೇವರು ಹೆಗಡೆಯವರೆಂದರೆ ಅವರೊಬ್ಬ ಯಕ್ಷಗಾನದ ಮನೆಮಾತಾದ ಅಪರೂಪದ ಕಲಾವಿದ. ನನ್ನ ಮನೆ ಅವರ ಮನೆ ಬಹಳ ಸಮೀಪ. ಅವರು ವಯಸ್ಸಿನಲ್ಲಿ ನನಗಿಂತ ಐವತ್ತು ವರ್ಷಕ್ಕಿಂತ ಹಿರಿಯರು. ಅವರನ್ನು ನಾವೆಲ್ಲ, ಅಂದರೆ ಇಡೀ ಊರವರೇ ಪ್ರೀತಿಯಿಂದ ಕರೆಯುವುದು ದೇವಣ್ಣ ಎಂದು. ದೇವಣ್ಣನ ದೇಹ ಸೌಂದರ್ಯ ಅಪರೂಪದ್ದು. ಆರು ಅಡಿಗೂ ಮೀರಿದ ಆಜಾನಬಾಹು. ಸಾಯಿಬಾಬಾರ ತಲೆಕೂದಲನ್ನು ಹೋಲುವ ತಲೆ ಕೂದಲು. ಆ ಕೂದಲು ಬಿಚ್ಚಿಕೊಂಡು ಬಿಳಿ ಜುಬ್ಬˌ ಬಿಳಿ ಮುಂಡು ಇಳಿ ಬಿಟ್ಟು ನಿಂತರೆ ಬಹಳ ಆಕರ್ಷಕ.
ಹಾಗಾಗಿಯೇ ದೇವಣ್ಣ ವೇಷ ಕಟ್ಟಿದರಂತೂ ಚೆಂದˌ ಕಟ್ಟದಿದ್ದರೆ ಇನ್ನೂ ಚೆಂದ. ಗಂಭೀರ ವ್ಯಕ್ತಿತ್ವ, ಆದರೆ ತುಂಬಾ ತುಂಬಾ ಸರಳ ಸಜ್ಜನ. ಯಾವುದೇ ದುಶ್ಚಟ ಅಂಟಿಸಿಕೊಂಡವರಲ್ಲ, ಸಂಧ್ಯಾವಂದನೆˌ ಅನುಷ್ಠಾನವನ್ನು ಎಂದೂ ಬಿಟ್ಟವರಲ್ಲ. ಹಲವಾರು ಆದರ್ಶ ಗುಣಗಳಿಂದಲೇ ಹೆಸರು ದೇವರು ಹೆಗಡೆಯಾದರೂ ಹಲವರು ಅವರನ್ನು ನಡೆದಾಡುವ ದೇವರು ಎಂದು ಕರೆದದ್ದೂ ಇದೆ. ಅಪ್ರತಿಮ ಕಲಾವಿದರಾಗಿದ್ದರಿಂದ ಪರ ಊರಲ್ಲಿ ದೇವಣ್ಣನಿಗೆ ಗೌರವ ಸಹಜ. ಆದರೆ, ದೇವಣ್ಣನ ಬಗೆಗೆ ಊರಲ್ಲಿಯೂ ಒಂದೇ ಒಂದು ಅಪಸ್ವರವಿರಲಿಲ್ಲ.
ನಾನು ಅವರ ವೇಷ ನೋಡಿ ತಿಳಿಯುವ ಹೊತ್ತಿಗೆ ಅವರು ವೇಷ ಬಿಡುವ ವಯಸ್ಸಿನಲ್ಲಿದ್ದರು. ಅವರು ನಿರ್ವಹಿಸಿದ ಕಂಸನನ್ನು ಕಂಡರೆ ಎಲ್ಲಿ ವಸುದೇವನನ್ನು ಕೊಂದೇ ಬಿಡುತ್ತಾರೋ ಅನಿಸುತ್ತಿತ್ತು. ಒಮ್ಮೆ ಕಮಿಶನರ್ ಒಬ್ಬರನ್ನು ಆಟಕ್ಕೆ ಆಹ್ವಾನಿಸಿದ್ದರಂತೆ. ಇದೇ ಸನ್ನಿವೇಶದಲ್ಲಿ ಕಮಿಶನರ್ ಸಾಹೇಬರು ಉದ್ವೇಗದಿಂದ, ಭಯದಿಂದ ಎದ್ದು ನಿಂತು stop it ಅಂತ ಹೇಳಿ, ಕೊನೆಗೆ ಇದು ಅಭಿನಯ ಮಾತ್ರ ಅಂತ ಸಮಾಧಾನಪಡಿಸಬೇಕಾಯಿತಂತೆ. ಅಂತಹ ದೈತ್ಯ ವೇಷ. ಕಣ್ಣಿನ ಚಲನೆ, ಅದಕ್ಕೆ ಪೂರಕವಾದ ಆಂಗಿಕ ಅಭಿನಯ. ಅವರ ಪ್ರತಿ ಪಾತ್ರವೂ ಬೇರೆ ಬೇರೆ ಅನುಭವವನ್ನು ಕೊಡುತ್ತಿತ್ತು.
ಅವರ ರಾವಣˌಕುಂಭಕರ್ಣˌಶಕುನಿˌಶನಿˌದುಷ್ಟಬುದ್ಧಿˌ ನಳˌ ಅಕ್ರೂರˌ ಬಲರಾಮˌ ಹನೂಮಂತˌ ಇಂದ್ರಜಿತು ಮೊದಲಾದ ಪಾತ್ರಗಳು ಪೌರಾಣಿಕ ಕಾಲದಲ್ಲಿ ಪಾತ್ರಗಳು ಹೀಗೆಯೇ ಇದ್ದಿರಬಹುದೆಂದು ಭಾವಿಸುವಷ್ಟು ಪ್ರಭಾವಿ ಆಗಿರುತ್ತಿತ್ತು ಎಂದು ಹೇಳುವುದನ್ನು ಕೇಳಿ ಬಲ್ಲೆ. ರಂಗದಲ್ಲಿ ಅವರ ಒಂದೇ ವೇಷವಿರುವಾಗಲೂ ರಂಗ ತುಂಬಿ ಕಾಣುತ್ತಿತ್ತು.
ಧರ್ಮಸ್ಥಳ ಮೇಳದಲ್ಲಿರುವಾಗ ಅವರ ಅಣ್ಣಪ್ಪ ಭೂತˌಸಾಲಿಗ್ರಾಮ ಮೇಳದಲ್ಲಿರುವಾಗ ಮೈತ್ರೇಯ ಭಟ್ಟ ಇವಂತು ಇನ್ನೂ ನೂರು ವರ್ಷ ಕಳೆದರೂ ಅಂತಹ ಭಾವಪರವಶತೆಗೆ ಯಾವ ಕಲಾವಿದರೂ ತಲುಪಲಾರರು. ಕುರಿಯ ವಿಠಲ ಶಾಸ್ರ್ತಿಯವರಿಗೆ ಅನಾರೋಗ್ಯವಾದಾಗ ತನ್ನ ಸ್ಥಾನಕ್ಕೆ ದೇವರು ಹೆಗಡೆಯವರನ್ನೇ ಕರೆಸಬೇಕೆಂದು ಆಗ್ರಹಿಸಿ ಕರೆಸಿಕೊಂಡಿದ್ದರಂತೆ.
ದೇವಣ್ಣ ತನ್ನ ಪಾತ್ರದ ಸಿದ್ಧತೆಗೆ ಓದಿ ಸಿದ್ಧಪಡಿಸಿಕೊಳ್ಳುತ್ತಿದ್ದರು. ನಾನು ಬಾಲ್ಯದಲ್ಲಿ ಅವರ ಮನೆಯ ಶೆಲ್ಪನಲ್ಲಿ ಪುಸ್ತಕಗಳು ತುಂಬಿದ್ದನ್ನು ನೋಡಿದ್ದೆನೆ. ಬಹುತೇಕ ನಾನು ಹೋದಾಗಲೆಲ್ಲ ಅವರು ಏನನ್ನಾದರೂ ಓದುತ್ತಿದ್ದ ದೃಶ್ಯವೇ ನನ್ನ ಕಣ್ಣು ಮುಂದೆ ಈಗಲೂ ಬರುತ್ತದೆ. ಉಪ್ಪರಿಗೆಯ ಮೇಲೆ ಸ್ಟ್ಯಾಂಡಿಗೆ ಜೋಡಿಸಿಟ್ಟ ಐದಡಿ ಎತ್ತರದ ಕನ್ನಡಿ ಇಟ್ಟುಕೊಂಡು ಅದರ ಮುಂದೆ ನಿಂತು ಹಲವು ಸಲ ಅಭಿನಯಿಸಿ ನೋಡಿಕೊಳ್ಳುತ್ತಿದ್ದರು. ಬಹುಷಃ ಇಂತಹ ತಯಾರಿಯನ್ನು ಹೆಚ್ಚಿನ ಕಲಾವಿದರು ಮಾಡುತ್ತಿಲ್ಲ. ಅವರ ಮನೆ ಸದಾ ಮಕ್ಕಳು, ದೊಡ್ಡವರು ಅಂತ ತುಂಬಿ ತುಳುಕುತ್ತಿತ್ತು. ಅನೇಕ ಮಹಾನ್ ಕಲಾವಿದರನ್ನು ಅಲ್ಲೇ ನಾನು ವೇಷವಿಲ್ಲದ ಬಿಡು ಮಯ್ಯಲ್ಲಿ ನೋಡಿದ್ದು. ಕೆರೆಮನೆ ಶಂಭು ಹೆಗಡೆˌ ಮಹಾಬಲ ಹೆಗಡೆˌಚಿಟ್ಟಾಣಿˌ ಹಿರಿಯ ಕೊಂಡದಕುಳಿ ಸಹೋದರರುˌಕರ್ಕಿಯ ಹೆಚ್ಚಿನ ಕಲಾವಿದರಲ್ಲದೆˌ ಸಾಹಿತ್ಯ ಲೋಕದ ಗೌರೀಶ ಕಾಯ್ಕಿಣಿˌ ಜಯಂತ ಕಾಯ್ಕಿಣಿ ಅಲ್ಲದೇ ಭಾಗವತೋತ್ತಮರುಗಳಾದ ಮರಿಯಪ್ಪ ಆಚಾರ್ˌ ಕಡತೋಕ ಮಂಜ ಭಾಗವತರುˌ ಕೃಷ್ಣ ಭಾಗವತರನ್ನು ಅವರನ್ನು ಕಣ್ಣಾರೆ ಕಂಡಿದ್ದೇನೆ.
ದೇವಣ್ಣ ಚೆನ್ನಾಗಿ ಕೊಳಲು ನುಡಿಸುತ್ತಿದ್ದರು. ಜ್ಯೋತಿಷ್ಯವನ್ನು ಶಾಸ್ತ್ರೀಯವಾಗಿ ಕಲಿತು, ಬಂದ ನೂರಾರು ಮಂದಿಗೆ ಹಣ ಪಡೆಯದೆ ಭವಿಷ್ಯ ನುಡಿದು ಸಮಾಧಾನಿಸುತ್ತಿದ್ದರು. ನನ್ನ ದೊಡ್ಡಪ್ಪ ಗಜಾನನ ವರ್ಧನ್ ಆವೆ ಮಣ್ಣಿನ ಗಣಪತಿ ಬೊಂಬೆಯನ್ನು ವರ್ಷಕ್ಕೆ ಐವತ್ತಕ್ಕೂ ಜಾಸ್ತಿ ಮೆತ್ತುತ್ತಿದ್ದರು. ಆಗೆಲ್ಲ ದೇವಣ್ಣ ದಿನವೂ ಬಂದು ತಾವೂ ಬೊಂಬೆ ಮೆತ್ತಲು ರೂಢಿ ಮಾಡಿಕೊಂಡಿದ್ದರು. ಇವರಿಗೆ ಸಂಗೀತದ ಗೀಳು ಇತ್ತು. ತುಂಬಾ ಹಾಸ್ಯ ಪ್ರಜ್ಞೆ ಇತ್ತು. ಇತರರ ಮಾತನ್ನು ತಾಳ್ಮೆಯಿಂದ ಆಲಿಸುತ್ತಿದ್ದರು. ಇವರಲ್ಲಿ ಒಂದು ಸಾಂತ್ವನದ ಮಾತು ಯಾವಾಗಲೂ ಇರುತ್ತಿತ್ತು. ಅಸಾಧ್ಯ ಪ್ರತ್ಯುತ್ಪನ್ನ ಮತಿ ಇವರಲ್ಲಿತ್ತು.
ದೇವಣ್ಣ ಓದಿದ್ದು ಕೇವಲ ನಾಲ್ಕನೆಯ ತರಗತಿಯವರೆಗೆ. ಆದರೆ ಪ್ರಯತ್ನಪಟ್ಟು ಹಿಂದಿ ಓದಿ ಅರ್ಥ ಮಾಡಲು ಕಲಿತುˌಗೋರಖಪುರದವರ ಹಿಂದಿ ರಾಮಾಯಣ ಮಹಾಭಾರತ ಭಾಗವತ ಗಳನ್ನು ಓದಿಕೊಂಡಿದ್ದರು. ಸಂಸ್ಕ್ರತವನ್ನು ಕಲಿತು ಜ್ಯೋತಿಷ್ಯ ಕಲಿತದ್ದೂ ಒಂದು ಸಾಧನೆಯೇ ಹೌದು. ಅತ್ಯುತ್ತಮ ಸಂಘಟನಾಶಕ್ತಿ ಉಳ್ಳವರಾಗಿದ್ದರು. ಉತ್ತಮ ಕೃಷಿಕರು ಕೂಡಾ.
ನಮ್ಮ ದೇವಣ್ಣನ ಯಾವುದೇ ಪಾತ್ರದ್ದೂ ವಿಡಿಯೋ ಇಲ್ಲ. ಆ ಕಾಲದಲ್ಲಿ ಅದನ್ನು ಮಾಡುವ ವ್ಯವಸ್ಥೆಯೂ ಇರಲಿಲ್ಲ. ಇದ್ದಿದ್ದರೆ ಅವರ ಪಾತ್ರದ ಕಲ್ಪನೆಯನ್ನಾದರೂ ಈ ಕಾಲದವರು ನೋಡುವ ಅವಕಾಶ ಒದಗುತ್ತಿತ್ತು. ಅವರು ಅಭಿನಯವನ್ನು ಅಭಿನಯಿಸದೆ ಪಾತ್ರವನ್ನು ಅಭಿನಯಿಸುತ್ತಿದ್ದರು. ಬದುಕಿದ್ದರೆ ಈ ವರ್ಷ ಅವರ ಶತಮಾನೋತ್ಸವ ಆಗಬೇಕಿತ್ತು. ಅಂತಹ ಪುಣ್ಯಾತ್ಮರನ್ನು ಯಕ್ಷಕುಲದವರು ಸದಾ ನೆನಪಿಡಲೇ ಬೇಕಿದೆ. ಮಹಾವಿಷ್ಣು ಯಕ್ಷಗಾನ ಮಂಡಳಿ ಕೋಣಾರೆ ಎಂಬ ಮೇಳವೊಂದನ್ನು ಕಟ್ಟಿ ಹಲವು ವರ್ಷಗಳ ಕಾಲ ನಡೆಸಿದ್ದರು ದೇವಣ್ಣ. ಮುರೂರಿನಲ್ಲಿ ಯಕ್ಷಗಾನ ಶಾಲೆ ಪ್ರಾರಂಭಿಸಿ ಹಲವಾರು ಉತ್ತಮ ಪ್ರೇಕ್ಷಕರನ್ನು ಇನ್ನು ವೃತ್ತಿ ಮೇಳದಲ್ಲಿರುವ ಹಲವಾರು ಹಿಮ್ಮೇಳ-ಮುಮ್ಮೇಳ ಕಲಾವಿದರನ್ನು ರಂಗಕ್ಕೆ ನೀಡಿದ್ದಾರೆ. ದೈತ್ಯ ಪ್ರತಿಭೆ ದೇವಣ್ಣ ಬಗ್ಗೆ ನನ್ನ ಅಳವಿಗೆ ನಿಲುಕುವುಷ್ಟು ಬರೆದಿದ್ದೇನೆ.
ಪ್ರಶಾಂತ್ ಹೆಗಡೆ ವರ್ಧನ್.