02/06/2023
ನಮ್ಮೂರ ಚುಂಚನಕಟ್ಟೆ ಸೇತುವೆ ಮೇಲೆ ಕೋತಿಗಳ ರಕ್ಷಣೆಗೆ ಹಾಕಿದ ಸೃಜನಶೀಲ ಸೂಚನ ಪಲಕ (Sign Board)
ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲ್ಲೂಕು ವ್ಯಾಪ್ತಿಯ ಚುಂಚನಕಟ್ಟೆ ನಮ್ಮ ಭಾಗದ ಪ್ರಮುಖ ಪ್ರೇಕ್ಷಣೀಯ ಸ್ಥಳ. ಇಲ್ಲಿನ ಕೋದಂಡರಾಮ ದೇವಾಲಯ, ಪ್ರತಿವರ್ಷ ಅಲ್ಲಿನ ನಡೆಯುವ ದನಗಳ ಜಾತ್ರೆ, ಜಾನುವಾರು ಸಂತೆ, ರಥೋತ್ಸವ, ಕಾವೇರಿ ನದಿ, ಜಲಪಾತ, ಸಕ್ಕರೆ ಕಾರ್ಖಾನೆ, ಕಿರು ವಿದ್ಯುತ್ ಉತ್ಪಾದನಾ ಘಟಕ ಮುಂತಾದವು ಈ ಪುಟ್ಟ ಗ್ರಾಮವನ್ನು ಪ್ರೇಕ್ಷಣೀಯ ತಾಣ ಮತ್ತು ಪ್ರಮುಖ ವ್ಯಾವಹಾರಿಕ ಕೇಂದ್ರವಾಗಿಸಿವೆ.
ನಮ್ಮೂರ ಭಾಗದಲ್ಲಿ ಎಲ್ಲೂ ಹೆಚ್ಚಾಗಿ ಕಾಣಸಿಗದ ಕೆಂಪು ಕೋತಿಗಳು ಇಲ್ಲಿ ಮಾತ್ರ ಕಾಣಸಿಗುತ್ತವೆ. ಹಿಂದಿನ ದಿನಗಳಿಗೆ ಹೋಲಿಸಿದೇ ಇತ್ತೀಚಿನ ಇಲ್ಲಿ ಇವುಗಳ ಸಂತತಿ ತೀರಾ ಕಡಿಮೆ ಇದ್ದರು ಅಲ್ಪಸ್ವಲ್ಪ ಉಳಿದಿವೆ. ಇನ್ನು ಚುಂಚನಕಟ್ಟೆಯಿಂದ ಸಾಲಿಗ್ರಾಮಕ್ಕೆ ಸಂಪರ್ಕ ಕಲ್ಪಿಸುವ, ಕಾವೇರಿ ನದಿ ಮೇಲಿನ ಈ ಸೇತುವೆ, ಹಾಸನ ಜಿಲ್ಲೆಯ ಕೊಣನೂರು, ರಾಮನಾಥಪುರ - ಮೈಸೂರು ನಗರಕ್ಕೆ ಇರುವ ಅತಿ ಪ್ರಮುಖ ಮಾರ್ಗ ಕೂಡ. ಈ ಸೇತುವೆ 1950 ರ ದಶಕದಲ್ಲಿ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪ ರವರಿಂದ ಉದ್ಘಾಟನೆಯಾಗಿದೆ. ಈ ಸೇತುವೆ ಮೇಲೆ ನದಿ ನೋಡಲು ಇಳಿಯುವ ಪ್ರವಾಸಿಗರು ತಮ್ಮ ಪುಣ್ಯ ಹೆಚ್ಚಲಿ ಎನ್ನುವ ಉದ್ದೇಶಕ್ಕೆ ಎನ್ನುವಂತೆ ಆಗಾಗ್ಗೆ ಆಹಾರ ನೀಡುವ ಕಾರಣದಿಂದಲೇನೋ ಇಲ್ಲಿ ಕೋತಿಗಳ ಸಂಖ್ಯೆ ಇತರೆಡೆಗಿಂತ ಹೆಚ್ಚಾಗಿ ಅವುಗಳು ರಸ್ತೆ ಅಪಘಾತಕ್ಕೆ ತುತ್ತಾಗುವ ಪ್ರಕರಣಗಳು ಕೂಡ ಹೆಚ್ಚಾಗಿವೆ. ಆ ಕಾರಣಕ್ಕೆ ಕೋತಿಗಳ ಮೇಲೆ ಕಾಳಜಿ ಹೊಂದಿದ ಯಾರೋ ಪುಣ್ಯಾತ್ಮರು ಈ ಸೂಚನ ಫಲಕವನ್ನು ಸೃಜನಾತ್ಮಕ ಬರಹದೊಂದಿಗೆ ಇಲ್ಲಿ ಅಳವಡಿಸಿದ್ದಾರೆ.
~ ಸಂಜಯ್ ಹೊಯ್ಸಳ