24/08/2019
‘ಶಿಡ್ಲಘಟ್ಟದ ದೇವರು ಹಿಂದುಮುಂದು’ ಎಂಬ ನಾಣ್ಣುಡಿಯಿಂದ ಕನ್ನಡಿಗರ -ಮನೆಮನಗಳಲ್ಲಿ ಸೇರಿಕೊಂಡ ಶಿಡ್ಲಘಟ್ಟವನ್ನು ಕ್ರಿ.ಶ.೧೫೨೬ರಲ್ಲಿ ಕೆಂಪೇಗೌಡನ ಮಡದಿ ಹಲಸೂರಮ್ಮ ಕಟ್ಟಿಸಿ ತನ್ನ ಮಾವನಾದ ಸಿಡಿಲಗೌಡನ ಹೆಸರಿನಿಂದ ಕರೆದಳು. ೧೭೯೯ರಲ್ಲಿ ಟಿಪ್ಪುಸುಲ್ತಾನನ ಮರಣದ ನಂತರ ದಕ್ಷಿಣ ಭಾರತವನ್ನು ಸರ್ವೇಕ್ಷಿಸಿದ ಬ್ರಿಟಿಷ್ ಅಧಿಕಾರಿ ಫ್ರಾನ್ಸಿಸ್ ಬುಕನನ್ ಶಿಡ್ಲಘಟ್ಟವನ್ನು ‘ಸಿಲಗುಟ್ಟ’ ಎಂದು ಜನರು ಕರೆಯುವುದನ್ನು ದಾಖಲಿಸಿದ್ದಾರೆ. ಇನ್ನೂರು ವರ್ಷಗಳ ಹಿಂದಿನ ಅವರ ದಾಖಲೆಯ ಪ್ರಕಾರ ಇಲ್ಲಿನ ಜನರು ತರಕಾರಿ ಬೆಳೆಯುವುದರಲ್ಲಿ, ಹತ್ತಿಯ ಬಟ್ಟೆಗಳನ್ನು ತಯಾರಿಸುವುದರಲ್ಲಿ ಸಿದ್ಧಹಸ್ತರಾಗಿದ್ದರಂತೆ. ಆದರೆ ಇಂದು ರೇಷ್ಮೆ ಮತ್ತು ಹೈನುಗಾರಿಕೆಗೆ ಶಿಡ್ಲಘಟ್ಟ ತಾಲ್ಲೂಕು ಹೆಸರುವಾಸಿ.
‘ಸಿಲಗುಟ್ಟ ತರಕಾರಿಗಳನ್ನು ಬೆಳೆಯುವುದರಲ್ಲಿ ಅತ್ಯಂತ ಹೆಸರುವಾಸಿ. ಗೋದಿ, ಅರಶಿನ, ಈರುಳ್ಳಿ, ಮೆಣಸಿನಕಾಯಿ, ಬೆಳ್ಳುಳ್ಳಿ, ಜೋಳ, ಕೊತ್ತಂಬರಿಯನ್ನೂ ಇಲ್ಲಿ ಬೆಳೆಯುವರು. ದನಗಳನ್ನು ಸಾಕಿದ್ದಾರೆ. ನೀರನ್ನು ಬಾವಿಯಿಂದ ತೆಗೆಯಲು ಇಲ್ಲಿ ಸಣ್ಣ ಏತವನ್ನು ಬಳಸುವರು. ನೀರು ೩೫ ಅಡಿ ಆಳಕ್ಕೆ ಹೋದರೂ ಇದರಿಂದ ನೀರೆತ್ತಬಹುದು. ಇಲ್ಲಿ ಒಂದು ಎಕರೆಗೆ ೬ ಕಂಡುಗ ರಾಗಿ ಬೆಳೆಯುತ್ತಾರೆ’ ಎಂದಿದ್ದ ಬುಕನನ್ ಬರಹದಿಂದ ನಮ್ಮ ಹಿಂದಿನವರ ಕೃಷಿ ಹಾಗೂ ನೀರಿನ ಸಮೃದ್ಧಿ ಬಗ್ಗೆ ತಿಳಿಯುತ್ತದೆ. ಈಗಿನ ನೀರಿನ ಕೊರತೆ, ಮೇವಿನ ಕೊರತೆ, ಬೆಳೆಗೆ ಸಿಗದ ಬೆಲೆ ಹೋಲಿಕೆಗೆ ಬರುತ್ತದೆ.
28 ಗ್ರಾಮ ಪಂಚಾಯ್ತಿಗಳು, 274 ಗ್ರಾಮಗಳು, ಜಂಗಮಕೋಟೆ, ಬಶೆಟ್ಟಹಳ್ಳಿ, ಶಿಡ್ಲಘಟ್ಟ ಮತ್ತು ಸಾದಲಿ ಎಂಬ ನಾಲ್ಕು ಹೋಬಳಿಗಳನ್ನೊಳಗೊಂಡ ಶಿಡ್ಲಘಟ್ಟ ತಾಲ್ಲೂಕು ರೇಷ್ಮೆ ಮತ್ತು ಹೈನುಗಾರಿಕೆಗೆ ಪ್ರಸಿದ್ಧಿಯಾಗಿದೆ. ದಿನವಹಿ ಒಂದು ಲಕ್ಷ ಇಪ್ಪತ್ತೈದು ಸಾವಿರ ಲೀಟರ್ ಹಾಲು ಉತ್ಪಾದನೆಯಿದೆ.
ಶಿಡ್ಲಘಟ್ಟದ ಹೊರವಲಯದ ದಿಬ್ಬೂರಹಳ್ಳಿ ರಸ್ತೆಯಲ್ಲಿ 9 ಕೋಟಿ 43 ಲಕ್ಷ ರೂಗಳ ವೆಚ್ಚದಲ್ಲಿ 4 ಎಕರೆ 35 ಗುಂಟೆ ಸ್ಥಳದಲ್ಲಿ 2015ರಲ್ಲಿ ನಿರ್ಮಾಣವಾಗಿರುವ ನೂತನ ನ್ಯಾಯಾಲಯ ಸಂಕೀರ್ಣ, 2013 ರಲ್ಲಿ ಪ್ರಾರಂಭಗೊಂಡ ಬ್ರಾಡ್ ಗೇಜ್ ರೈಲು, ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಪ್ರಾರಂಭಗೊಂಡ ಇ ಹರಾಜು, ಆನೂರು ಬಳಿ ಅಗ್ನಿ ಶಾಮಕ ದಳಕ್ಕಾಗಿ ನಿರ್ಮಾಣ ಪ್ರಗತಿಯಲ್ಲಿರುವ ಕಟ್ಟಡ ಸಂಕೀರ್ಣ, ನಗರಸಭೆಯಾದ ಪುರಸಭೆ, ಶತಮಾನ ಪೂರೈಸಿದ ಹಳೆಯ ತಾಲ್ಲೂಕು ಕಚೇರಿಯನ್ನು ಕಂದಾಯ ಭವನವನ್ನಾಗಿ ಮಾಡಿದ್ದು ಮುಂತಾದ ಬೆಳವಣಿಗೆಗಳು ಒಂದೆಡೆಯಾದರೆ, ಬಸ್ ಡಿಪೋ, ಅಂಬೇಡ್ಕರ್ ಭವ, ರಂಗ ಮಂದಿರ, ರೇಷ್ಮೆ ಗೂಡಿನ ಮಾರುಕಟ್ಟೆಗೆ ಹೊಸ ಸ್ಥಳ ಮತ್ತು ಮೂಲಭೂತ ಸೌಕರ್ಯ, ನಗರಸಭೆಯ ಹೊಸ ಕಟ್ಟಡ ಹಾಗೂ ನಗರದ ನೀರು ಮತ್ತು ತ್ಯಾಜ್ಯ ವಿಲೇವಾರಿ ಮೊದಲಾದ ಬೇಕುಗಳ ಪಟ್ಟಿಯಿದೆ.