26/09/2021
#ಅಖಿಲ_ಭಾರತ_ಬಂದ್ #ಸೆಪ್ಟೆಂಬರ್27
ರೈತ-ಕೃಷಿ ಕಾರ್ಮಿಕರ ಹೋರಾಟಕ್ಕೆ ಜಯವಾಗಲಿ
ಕೇಂದ್ರದ ಮೋದಿ ಸರ್ಕಾರದ ಕರಾಳ ಕೃಷಿ ಕಾಯ್ದೆಗಳ ವಿರುದ್ದ ದೇಶಾದ್ಯಂತ ನಡೆಯುತ್ತಿರುವ ರೈತರ ಪ್ರತಿಭಟನೆ 300 ದಿನಗಳನ್ನು ಪೂರೈಸಿದೆ. ದೆಹಲಿ, ಹರಿಯಾಣ, ಉತ್ತರಪ್ರದೇಶ, ಪಂಜಾಬ್ , ಮಹಾರಾಷ್ಟ್ರ ಹಾಗೂ ಇನ್ನಿತರ ರಾಜ್ಯಗಳಲ್ಲಿ ಸಾವಿರಾರು ರೈತರು ಚಳಿ, ಮಳೆ, ಗಾಳಿ, ಕೊರೊನಾ ವೈರಾಣುವನ್ನು ಲೆಕ್ಕಿಸದೇ ನಿರಂತವಾಗಿ ಕರಾಳ ಕೃಷಿ ಕಾಯ್ದೆಯ ರದ್ದತಿ ಹಾಗೂ ಕನಿಷ್ಟ ಬೆಂಬಲ ಬೆಲೆಗೆ ಕಾನೂನು ಖಾತರಿಯ ಬೇಡಿಕೆಯೊಂದಿಗೆ ಪ್ರತಿಭಟಿಸುತ್ತಲೇ ಇದ್ದಾರೆ. 600ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ರೈತರ ಹೋರಾಟ ʼಮಾಡು ಇಲ್ಲವೇ ಮಡಿʼಯ ಹಂತಕ್ಕೆ ಬಂದು ತಲುಪಿದ್ದು, ಸೆಪ್ಟೆಂಬರ್ ೨೭ರಂದು ಭಾರತ್ ಬಂದ್ʼಗೆ ಪ್ರತಿಭಟನಾನಿರತ ರೈತರ ಒಕ್ಕೂಟ ಕರೆಯನ್ನಿತ್ತಿದೆ..
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಪ್ರತಿಭಟನಾ ರೈತರೊಂದಿಗೆ ಇದುವರೆವಿಗೂ 12 ಸುತ್ತಿಗೂ ಹೆಚ್ಚು ಮಾತುಕತೆ ನಡೆಸಿದ್ದರೂ ರೈತರ ಬೇಡಿಕೆಗಳನ್ನು ಪೂರೈಸಲು ಒಪ್ಪದ ಮೋದಿ ಸರ್ಕಾರ ತನ್ನ ಹಠಮಾರಿ ಧೋರಣೆಯನ್ನು ಮುಂದುವರೆಸಿದೆ.
ಕೆಲವೇ ಕೆಲವು ಆಯ್ದ, ಬೆರಳೆಣಿಕೆಯ ಕಾರ್ಪೋರೇಟ್ ಕಂಪನಿಗಳ ಹಿತಾಸಕ್ತಿಗಳನ್ನು ಕಾಪಾಡಲೆಂದೇ ಕೃಷಿ ಕಾಯ್ದೆಗಳನ್ನು ತಂದಿರುವ ಮೋದಿ ಸರ್ಕಾರ ರೈತರನ್ನು ಬೀದಿ ಪಾಲು ಮಾಡಲು ತುದಿಗಾಲಲ್ಲಿ ನಿಂತಿದೆ. ಪ್ರಾರಂಭದಿಂದಲೂ ಪ್ರತಿಭಟನೆಯನ್ನು ಹತ್ತಿಕ್ಕಲು ಜನವಿರೋಧಿ ಕ್ರಮಗಳನ್ನು ಅನುಸರಿಸುತ್ತಾ ಇರುವ ಬಿಜೆಪಿ ಸರ್ಕಾರ ಇಂದಿಗೂ ತನ್ನೆಲ್ಲಾ ಶಕ್ತಿಗಳನ್ನು ವಿನಿಯೋಗಿಸಿ ರೈತರ ಕೂಗನ್ನು ಸದೆಬಡಿಯಲು ನಿರತವಾಗಿದೆ.
ಪ್ರತಿಭಟನೆ ನಡೆಸುತ್ತಿರುವವರು ರೈತರಲ್ಲ ಎಂದೋ, ವಿದೇಶಿ ಸಂಸ್ಥೆಗಳ ಪ್ರಾಯೋಜಿತ ಹೋರಾಟವೆಂದೋ ಸುಳ್ಳು-ಅಪಪ್ರಚಾರ ಮಾಡುತ್ತಾ, ರಸ್ತೆಯನ್ನು ಬಂದ್ ಮಾಡಿ, ಹಳ್ಳ ತೋಡಿಸುವುದು, ಜಲ ಫಿರಂಗಿ, ಅಶ್ರುವಾಯು, ಲಾಠಿ ಚಾರ್ಚ್ ಮುಂತಾದ ಬಲಪ್ರಯೋಗಗಳನ್ನು ಮುಂದುವರೆಸುತ್ತಲೇ ಇದೆ.
ಕಳೆದ ನವೆಂಬರ್ ನಿಂದ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಹೋರಾಟ ದೇಶದ ಗಮನ ಸೆಳೆದಿತ್ತು. ಜನವರಿ 12ರಂದು ಕೃಷಿ ಕಾಯ್ದೆ ಗಳಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕವಾಗಿ ತಡೆ ನೀಡಿ, ತಾನೇ ರಚಿಸಿದ ಸಮಿತಿಯಲ್ಲಿ ನಾಲ್ವರೂ ಸರ್ಕಾರದ ಪರ ವಕಾಲತ್ತು ವಹಿಸಿದ ಮಹಾನುಭಾವರು ಇದದ್ದು ದೊಡ್ಡ ನಗೆಪಾಟಲಿಗೆ ಈಡಾಗಿಸಿತ್ತು.
ರೈತರ ಹೋರಾಟ-ಒಗ್ಗಟ್ಟನ್ನು ಒಡೆಯಲು ಬಿಜೆಪಿಯ ಸರ್ಕಾರ ನಾನಾ ರೀತಿಯ ಹುನ್ನಾರಗಳನ್ನು ಮಾಡುತ್ತಲೇ ಇದೆ. ಕೇಂದ್ರ ಸರ್ಕಾರದ ಒಡೆದಾಳುವ ನೀತಿಯನ್ನು ಅರಿತ ರೈತಾಪೀ ಕೃಷಿ ಕಾರ್ಮಿಕರು ಒಂದಾಗಿದ್ದಾರೆ. ಇತ್ತೀಚಿಗೆ ಉತ್ತರಪ್ರದೇಶದ ಮುಜಾಫರ್ ನಗರ ಜಿಲ್ಲೆಯಲ್ಲಿ ನಡೆದ ʼರೈತ ಮಹಾ ಪಂಚಾಯತ್ʼ ಪ್ರತಿಭಟನೆಯಲ್ಲಿ ಹಿಂದೂ-ಮುಸ್ಲಿಂ ರೈತಾಪಿ ಬಂಧುಗಳು ಒಂದಾಗಿ ಹೋರಾಟ ನಡೆಸಿರುವುದು ಆಶಾದಾಯಕ ಬೆಳವಣಿಗೆ. ಈ ನಡೆಯೇ ಬಿಜೆಪಿಯ ಮೋದಿ-ಯೋಗಿಗೆ ನಡುಕ ಹುಟ್ಟಿಸಿದೆ.
ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ದ ಹಾಗೂ ಬಿಜೆಪಿಯ ರೈತಾಪಿ ಕೃಷಿ ಕಾರ್ಮಿಕರ ವಿರೋಧಿ ಧೋರಣೆಗಳನ್ನು ಖಂಡಿಸಿ ಸೆಪ್ಟೆಂಬರ್ 27ರಂದು ನಡೆಯಲಿರುವ ʼಭಾರತ್ ಬಂದ್ʼಗೆ ಭಾರತದ ದುಡಿಯುವ ವರ್ಗ ಬೆಂಬಲ ನೀಡಿ ರೈತರ ಹೋರಾಟವನ್ನು ಯಶಸ್ವಿಗೊಳಿಸಬೇಕಿದೆ.
ನಮ್ಮ ಹೋರಾಟದ ಹಕ್ಕೋತ್ತಾಯಗಳು:
• ನೂತನ ಕರಾಳ ಕೃಷಿ ಕಾಯಿದೆಗಳು ಈ ಕೂಡಲೇ ರದ್ದಾಗಲಿ.
• ಕೃಷಿ, ಸಾರ್ವಜನಿಕ ವಲಯದ ಖಾಸಗಿಕರಣ ಈ ಕೂಡಲೇ ನಿಲ್ಲಲಿ.
• ಖಾಸಗಿಕರಣಗೊಂಡ ಕಾರ್ಖಾನೆ, ಉದ್ಯಮ ಮತ್ತು ಸೇವೆಗಳನ್ನು ಮರು-ರಾಷ್ಟ್ರೀಕರಣಗೊಳಿಸಿ.
• ಕೃಷಿ ಕ್ಷೇತ್ರದಲ್ಲಿ ಯಾವುದೇ ಪ್ರತ್ಯಕ್ಷ ಹಾಗೂ ಪರೋಕ್ಷವಾದ ಬಂಡವಾಳಿಗಳ ಪ್ರಭಾವ ನಿಲ್ಲಲಿ.
• ರೈತರ ನೈಜ ಸಹಕಾರಿ ಸಂಘಗಳ ಸ್ಥಾಪನೆಯಾಗಲಿ. ಬೆಲೆಗಳು, ಬೆಂಬಲಬೆಲೆ ಮತ್ತು ಸಬ್ಸಿಡಿಗಳ ನಿಗದಿಗೊಳಿಸುವ ಹತೋಟಿ ಸಹಕಾರಿ ಸಂಘಗಳಿಗೆ ಬೇಕು.
• ರೈತರ ಕಾರ್ಮಿಕರ ಮತ್ತು ಯುವಜನರ ಪ್ರತಿರೋಧವನ್ನು ಅಪರಾಧೀಕರಣಗೊಳಿಸುವುದು ನಿಲ್ಲಲಿ.
• ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆ ದೇಶಾದ್ಯಂತ ಮರುಸ್ಥಾಪನೆಯಾಗಲಿ.
• ಕನಿಷ್ಟ ಬೆಂಬಲ ಬೆಲೆ(ಎಂಎಸ್ಪಿ) ರೈತ ಸಂಘಗಳ ಒಪ್ಪಿಗೆಯೊಂದಿಗೆ ನಿಗದಿಯಾಗಲಿ.
• ಕೃಷಿ ಸಹಾಯಧನವನ್ನು ಈ ಕೂಡಲೇ ಹೆಚ್ಚಿಸಿ.
• ಪಡಿತರ ವ್ಯವಸ್ಥೆಯ ನಾಶ ನಿಲ್ಲಲಿ.
• ದೇಶಾದ್ಯಂತ ಎಪಿಎಂಸಿ ಮಾರುಕಟ್ಟೆಗಳು ಸ್ಥಾಪನೆಯಾಗಲಿ.
• ಸಣ್ಣ ಹಿಡುವಳಿದಾರರ, ಬಡ ರೈತರ ಮತ್ತು ಭೂಹೀನ ರೈತಾಪಿಗಳ ಸಾಲ ಸಂಪೂರ್ಣ ರದ್ದಾಗಲಿ.
• ಸರ್ಕಾರಿ ಹಿಡಿತದಲ್ಲಿರುವ ವಿಶಾಲ ಭೂಪ್ರದೇಶವನ್ನು ಭೂಹೀನ ರೈತರಿಗೆ ಹಂಚಿಕೆಯಾಗಲಿ.
• ಬೇನಾಮಿ ಭೂ-ಒಡೆತನ ರದ್ದಾಗಲಿ. ಪಾಣಿ-ಪಟ್ಟಾಗಳು ಕೃಷಿಯಲ್ಲೇ ತೊಡಗಿರುವ ರೈತರ ಹೆಸರಿಗೆ ವರ್ಗಾವಣೆಯಾಗಲಿ.