10/03/2026
ಹೆಣ್ಣು ಮಗು ಜನಿಸಿದರೆ ಅದೊಂದು ಹೊರೆ ಎನ್ನುವ ಮನಸ್ಥಿತಿ ಇಂದಿಗೂ ಅನೇಕರಲ್ಲಿದೆ. ಇದನ್ನು ನಿವಾರಿಸಲು ಹೆಣ್ಣುಭ್ರೂಣ ಹತ್ಯೆ, ಬಾಲ್ಯವಿವಾಹ ನಿಷೇಧ ಕಾಯ್ದೆಗಳು, ಹೆಣ್ಣುಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕೆ ಪ್ರೋತ್ಸಾಹ ನೀಡುವಂತಹ ಯೋಜನೆಗಳನ್ನು ಸರ್ಕಾರ ರೂಪಿಸುತ್ತಲೇ ಇದೆ. ಆದರೆ, ಇದು ಪೂರ್ಣಪ್ರಮಾಣದಲ್ಲಿ ಸಾಕಾರಗೊಳ್ಳಲು ಸಾರ್ವಜನಿಕರ ಸಹಕಾರ ಅಗತ್ಯ. ಅದರಲ್ಲಿಯೂ ಪಂಚಾಯತಿಗಳು ಮಹತ್ವದ ಪಾತ್ರ ವಹಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿ ಗ್ರಾಮಪಂಚಾಯತಿ ಮಾದರಿ ಹೆಜ್ಜೆ ಇರಿಸಿದೆ. ಈ ಪಂಚಾಯತಿಯು ತನ್ನ ವ್ಯಾಪ್ತಿಯಲ್ಲಿ ಜನಿಸಿದ ಪ್ರತಿ ಹೆಣ್ಣುಮಗುವಿನ ಹೆಸರಿನಲ್ಲಿ ₹5,500 ಠೇವಣಿ ಇರಿಸುತ್ತಿದೆ. ಇದು ಹೆಣ್ಣುಮಕ್ಕಳ ಭವಿಷ್ಯದ ಆರ್ಥಿಕ ಭದ್ರತೆಯ ದೃಷ್ಟಿಯಿಂದ ಮಹತ್ವದ್ದಾಗಿದೆ.
ಸುಮಾರು 12 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಈ ಹೂಲಿ ಪಂಚಾಯತಿಯು ವಾರ್ಷಿಕವಾಗಿ ₹17 ಲಕ್ಷ ಆದಾಯ ಸಂಗ್ರಹಿಸುತ್ತಿದೆ. ಸ್ವಂತ ಸಂಪನ್ಮೂಲವನ್ನು ಬಳಸಿಕೊಂಡು, ಸಾಮಾನ್ಯ ವರ್ಗದ ಕುಟುಂಬಗಳು ಹೆಣ್ಣುಮಕ್ಕಳನ್ನು ಬೆಳೆಸಲು ಉತ್ತೇಜನ ನೀಡುವಂತಹ 'ಕುಮಾರಿ ಸಮೃದ್ಧಿ' ಯೋಜನೆಯನ್ನು ಕಳೆದ ನಾಲ್ಕು ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಪಂಚಾಯತಿ ವ್ಯಾಪ್ತಿಯಲ್ಲಿನ ದಂಪತಿಗೆ ಮೊದಲ ಬಾರಿ ಅಥವಾ ಸತತ ಎರಡನೇ ಬಾರಿ ಹೆಣ್ಣುಮಗು ಜನಿಸಿದರೆ, ಆ ಮಗುವಿನ ಹೆಸರಿನಲ್ಲಿ ಠೇವಣಿ ಇರಿಸುತ್ತಿದೆ. 2022ರಿಂದಲೂ ಈ ಪದ್ಧತಿಯನ್ನು ಪಾಲಿಸಿಕೊಂಡು ಬರುತ್ತಿರುವ ಪಂಚಾಯತಿಯು, ಸಾಮಾಜಿಕ ಬದಲಾವಣೆಗೆ ತನ್ನದೇ ಕೊಡುಗೆ ನೀಡುತ್ತಿದೆ. ಈವರೆಗೂ 49 ಮಕ್ಕಳ ಹೆಸರಿನಲ್ಲಿ ಒಟ್ಟು ₹2.46 ಲಕ್ಷ ಠೇವಣಿ ಇಡಲಾಗಿದೆ. ಪ್ರತಿ ವರ್ಷ ಜನವರಿ 26 ಮತ್ತು ಆಗಸ್ಟ್ 15ರಂದು ಹೆಣ್ಣುಮಕ್ಕಳ ತಾಯಂದಿರಿಗೆ ಠೇವಣಿ ಮೊತ್ತದ ಮಾಹಿತಿ ನೀಡಲಾಗುತ್ತಿದೆ.
18 ವರ್ಷದ ಬಳಿಕ ಬಡ್ಡಿ ಸಹಿತ ಹಣವು ಮಗುವಿಗೆ ಸಿಗಲಿದೆ. ಇದು ಅವರ ಉನ್ನತ ವಿದ್ಯಾಭ್ಯಾಸ ಅಥವಾ ಸ್ವಂತ ಉದ್ಯಮ ನಡೆಸುವಂತಹ ಉದ್ದೇಶಗಳಿಗೆ ನೆರವಾಗಲಿದೆ.
ಮುಖ್ಯವಾಗಿ ಕೂಲಿಕಾರ್ಮಿಕರ ಕುಟುಂಬಗಳಿಗೆ ಇದು ಆರ್ಥಿಕ ಮತ್ತು ನೈತಿಕ ಬಲ ತುಂಬುವ ಯೋಜನೆಯಾಗಿದೆ. ಇಂತಹ ವಿಶಿಷ್ಟ ಯೋಜನೆಯನ್ನು ರೂಪಿಸಿ, ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಪಂಚಾಯತಿ ಪ್ರತಿನಿಧಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ ಅಭಿನಂದನೆಗಳು.